ಬೆಂಗಳೂರಿನಲ್ಲಿ ಬಾಲಕನ ಅಪಹರಣ ಸುಖಾಂತ್ಯ
ಬೆಂಗಳೂರು, ಸೆ. 18 : ನಗರದ ಚೋಳರಪಾಳ್ಯ ಮನೆಯೊಂದಕ್ಕೆ ನುಗ್ಗಿ ಬಾಲಕನನ್ನು ಅಪಹರಿಸಿ ಪರಾರಿಯಾಗಿದ್ದ ದುಷ್ಕರ್ಮಿಗಳ ತಂಡವನ್ನು ಮಹತ್ವದ ಕಾರ್ಯಾಚರಣೆಯಲ್ಲಿ ಜ್ಞಾನಭಾರತಿ ಪೊಲೀಸರು ಅರ್ಧ ಗಂಟೆಯಲ್ಲಿಯೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಪಹೃತ ಬಾಲಕ ಶ್ರವಣ್ ಸುರಕ್ಷಿತವಾಗಿದ್ದಾನೆ. ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಈ ಮೂಲಕ ಅಪಹರಣ ನಾಟಕ ಸುಖಾಂತ್ಯಗೊಂಡಿದೆ.
ಮೂರು ಜನ ಅಪಹರಣಕಾರರಲ್ಲಿ ಒಬ್ಬನು ಶ್ರವಣ್ ಮನೆ ಮೇಲ್ಮಡಿಯಲ್ಲಿ ವಾಸಿಸುತ್ತಿದ್ದ. ಹಾಗೂ ಇಬ್ಬರು ಆತನ ಗೆಳೆಯರಾಗಿದ್ದಾರೆ. ಕಾರಿನಲ್ಲಿ ಅಪಹರಿಸಿಕೊಂಡು ತೆರಳುತ್ತಿದ್ದಾಗೆ ಶ್ರವಣ್ ಕಿರುಚಾಡುತ್ತಿದ್ದನ್ನು ಕೇಳಿಸಿಕೊಂಡ ಸಾರ್ವಜನಿಕರು ಪೊಲೀಸ್ ಕಂಟ್ರೋಲ್ ರೂಮ್ ಗೆ ಕರೆ ಮಾಡಿ ಅಪಹರಣ ವಿಷಯ ಹಾಗೂ ಕಾರ್ ನಂಬರ್ ತಿಳಿಸಿದ್ದಾರೆ. ತಕ್ಷಣ ಕಾರ್ಯ ಪ್ರವೃತ್ತರಾದ ಜ್ಞಾನ ಭಾರತಿ ಪೊಲೀಸರು ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೆಚ್ಚಿನ ಮಾಹಿತಿ ವಿಚಾರಣೆ ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಹರಣದ ಹಿನ್ನೆಲೆ
ಕಾರಿನಲ್ಲಿ ಬಂದಿದ್ದ ಮೂರು ಜನ ದುಷ್ಕರ್ಮಿಗಳ ತಂಡ ಹಾಡುಹಗಲೇ ಮನೆಗೆ ನುಗ್ಗಿ ಗನ್ ತೋರಿಸಿ ಆರು ವರ್ಷದ ಬಾಲಕನನ್ನು ಅಪಹರಣ ಮಾಡಿಕೊಂಡು ಪರಾರಿಯಾಗಿರುವ ಘಟನೆ ಜ್ಞಾನಭಾರತಿ ಪೊಲೀಸ್ ಠಾಣೆಯ ಮಾಗಡಿ ರಸ್ತೆಯಲ್ಲಿರುವ ಚೋಳರಪಾಳ್ಯದಲ್ಲಿ ಗುರುವಾರ ಮಧ್ಯಾಹ್ನ ನಡೆದಿತ್ತು.
ಶ್ರವಣ್(6) ಅಪಹೃತ ಬಾಲಕ. ಕಾರಿನಲ್ಲಿ ಬಂದಿದ್ದ ಮೂರು ಮಂದಿ ದುಷ್ಕರ್ಮಿಗಳ ತಂಡ ಮನೆಗೆ ನುಗ್ಗಿ ಗನ್ ತೋರಿಸಿದ್ದಲ್ಲದೇ, ಶ್ರವಣ್ ತಾಯಿಯ ಬಾಯಿಗೆ ಬಟ್ಟೆ ಕಟ್ಟಿ ಬಾಲಕನನ್ನು ಅಪಹರಿಸಿಕೊಂಡು ಪರಾರಿಯಾಗಿದ್ದರು. ಘಟನೆ ತಿಳಿಯುತ್ತಿದ್ದಂತೆಯೇ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ದುಷ್ಕರ್ಮಿಗಳ ಬಂಧನಕ್ಕೆ ವ್ಯಾಪಕ ಜಾಲ ಬೀಸಲಾಗಿತ್ತು.
(ದಟ್ಸ್ ಕನ್ನಡ ವಾರ್ತೆ)