ಸ್ಪೀಡ್ ಗವರ್ನರ್ ಅಳವಡಿಕೆ ವಿರೋಧಿಸಿ ಮುಷ್ಕರ
ಬೆಂಗಳೂರು, ಸೆ.18: ಸ್ಪೀಡ್ ಗವರ್ನರ್ ಅಳವಡಿಸುವಂತೆ ಸೂಚಿಸಿ ಸರ್ಕಾರ ನೀಡಿರುವ ಆದೇಶವನ್ನು ವಿರೋಧಿಸಿ ಸೆ.30ರಂದು ರಾಜ್ಯಾದ್ಯಂತ ಲಾರಿ ಮಾಲಿಕರು ಮುಷ್ಕರ ಹೂಡಲಿದ್ದಾರೆ.
ಸೆ.30ರೊಳಗೆ ಸ್ಪೀಡ್ ಗವರ್ನರ್ ಅಳವಡಿಸದ ವಾಹನಗಳ ಓಡಾಟಕ್ಕೆ ಅವಕಾಶ ನೀಡುವುದಿಲ್ಲ ಎಂದು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ನೋಂದಾವಣೆಗೊಂಡ ಎಲ್ಲ ವಾಣಿಜ್ಯ ವಾಹನಗಳು ಮತ್ತು ರಾಜ್ಯ ಪ್ರವೇಶಿಸುವ ವಾಹನಗಳು ಸೆ.30ರೊಳಗೆ ಸ್ಪೀಡ್ ಗವರ್ನರ್ ಅಳವಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಲಾರಿ ಮಾಲೀಕರು ಇದನ್ನು ವಿರೋಧಿಸಿ ಮುಷ್ಕರ ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ.''ದೇಶಾದ್ಯಂತ ನಿಯಮಗಳು ಏಕರೂಪವಾಗಿರಬೇಕು, ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ'' ಎಂದು ಕರ್ನಾಟಕ ಸರಕು ಸಾಗಾಣಿಕೆದಾರರ ಸಂಘಟನೆ ಅಧ್ಯಕ್ಷ ಎಸ್.ಪಿ.ವಿಜ್ ತಿಳಿಸಿದ್ದಾರೆ. ರಾಜ್ಯ ಸರ್ಕಾರ ಸ್ಪೀಡ್ ಗವರ್ನರ್ ಆದೇಶ ಹೊರಡಿಸಿರುವ ಕಾರಣ ಹೊರ ರಾಜ್ಯದಿಂದ ಬರುವ ಲಾರಿಗಳು ಗಡಿ ಪ್ರದೇಶದಲ್ಲಿ ನಿಲ್ಲುವ ಪರಿಸ್ಥಿತಿ ತಲೆದೋರುತ್ತದೆ. ಆದಕಾರಣ ಸರ್ಕಾರ ಈ ಆದೇಶವನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು ಎಂದು ಕರ್ನಾಟಕ ಲಾರಿ ಮಾಲಿಕರ ಮತ್ತು ಏಜೆಂಟರ ಸಂಘಟನೆಯ ಅಧ್ಯಕ್ಷ ಷಣ್ಮುಗಪ್ಪ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)