ನಗರದ ಗುಪ್ತ ಸ್ಥಳದಲ್ಲಿ 22 ಶಂಕಿತರ ವಿಚಾರಣೆ
ಬೆಂಗಳೂರು, ಸೆ. 18 : ನಗರದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ 22 ಶಂಕಿತರ ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನಡೆಯುತ್ತಿದೆ. ವಿಚಾರಣೆ ವೇಳೆಯಲ್ಲಿ ಸ್ಫೋಟ ಸಂಚಿನ ಕೆಲ ಮಹತ್ವದ ವಿಷಯಗಳು ದೊರೆಕಿದ್ದು, ಶೀಘ್ರದಲ್ಲಿ ಸ್ಫೋಟದ ಪ್ರಕರಣವನ್ನು ಬೇಧಿಸಲಾಗುವುದು ಪೊಲೀಸ್ ಮೂಲಗಳು ತಿಳಿಸಿವೆ.
ನಗರದಲ್ಲಿ ಜುಲೈ 26 ರಂದು ಸರಣಿ ಬಾಂಬ್ ಸ್ಫೋಟಗೊಂಡು ತಲ್ಲಣ ಉಂಟುಮಾಡಿತ್ತು. ಸ್ಫೋಟದಲ್ಲಿ ಒಬ್ಬ ಮಹಿಳೆ ಮೃತಪಟ್ಟಿದ್ದರು. ಆರು ಜನ ಗಾಯಗೊಂಡಿದ್ದರು. ನಗರದ ಫೋರಂ ಮಾಲ್ ಬಳಿ ಜೀವಂತ ಬಾಂಬ್ ನ್ನು ನಿಷ್ಕ್ರಿಯಗೊಳಿಸಲಾಗಿತ್ತು. ಮರುದಿನ ಅದಮದಾಬಾದ್ ನಲ್ಲಿ ಸುಮಾರು 17 ಕಡೆಗಳಲ್ಲಿ ಬಾಂಬ್ ಸ್ಫೋಟಗೊಂಡಿತ್ತು. ಘಟನೆಯಲ್ಲಿ 60 ಮಂದಿ ಮೃತಪಟ್ಟಿದ್ದರು. 100 ಹೆಚ್ಚು ಜನರು ಗಾಯಗೊಂಡಿದ್ದರು. ವಾಣಿಜ್ಯ ನಗರಿ ಸೂರತ್ ನಲ್ಲಿಯೂ ಅನೇಕ ಜೀವಂತ ಬಾಂಬ್ ಗಳನ್ನು ನಿಷ್ಕ್ರಿಯಗೊಳಿಸಲಾಗಿತ್ತು. ಈ ಎರಡು ಸ್ಫೋಟದ ಹೊಣೆಯನ್ನು ಇಂಡಿಯನ್ ಮುಜಾಹಿದೀನ್ ಸಂಘಟನೆ ಹೊತ್ತುಕೊಂಡಿತ್ತು.
ಬೆಂಗಳೂರಿನಲ್ಲಿ ಸ್ಫೋಟದ ಹಿನ್ನೆಲೆಯಲ್ಲಿ ಹೊಸದಾಗಿ 22 ಮಂದಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಈ ಮುಂಚೆ ಕೆಲವು ಸಿಮಿ ಕಾರ್ಯಕರ್ತರನ್ನು ಬಂಧಿಸಿ, ವಿಚಾರಣೆ ನಡೆಸಲಾಗಿತ್ತು. ಗುಪ್ತ ಸ್ಥಳದಲ್ಲಿ ವಿಚಾರಣೆ ನಡೆಸತೊಡಗಿರುವ ಪೊಲೀಸರು ಶೀಘ್ರದಲ್ಲಿ ಪ್ರಕರಣವನ್ನು ಭೇದಿಸುವುದಾಗಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)