ಹರಕೆಯ ಕುರಿಯಾಗಲು ಸಿದ್ಧವಾದ ಪಾಟೀಲ್!
ನವದೆಹಲಿ, ಸೆ. 16 : ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನನ್ನ ರಾಜೀನಾಮೆಯನ್ನು ನಿರೀಕ್ಷಿಸಿದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಗೃಹ ಸಚಿವ ಶಿವರಾಜ್ ಪಾಟೀಲ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರುತ್ತೇನೆ ಎಂದರು. ''ದೇಶದ ವಿವಿಧ ಸ್ಥಳಗಳಲ್ಲಿ ನಡೆಯುತ್ತಿರುವ ವಿಧ್ವಂಸಕ ಕೃತ್ಯಗಳನ್ನು ತಡೆಯುವಲ್ಲಿ ಗೃಹ ಇಲಾಖೆ ಅಸಮರ್ಥವಾಗಿದೆ'' ಎಂಬ ಆರೋಪ ಕಾಂಗ್ರೆಸ್ ಹಾಗೂ ಯುಪಿಎ ಸರ್ಕಾರದಲ್ಲಿ ಕೇಳಿ ಬಂದದ್ದರಿಂದ ಶಿವರಾಜ್ ಪಾಟೀಲ್ ತಲೆದಂಡಕ್ಕೆ ಸಮಯ ಹತ್ತಿರವಾಗಿತ್ತು. ಅಲ್ಲದೇ ಸೋಮವಾರ ನವದೆಹಲಿಯಲ್ಲಿ ನಡೆದ ಸರ್ಕಾರದ ಉನ್ನತ ಮಟ್ಟದ ಸಭೆಯಲ್ಲಿ ಶಿವರಾಜ್ ಪಾಟೀಲ್ ಅವರಿಗೆ ಆಹ್ವಾನ ನೀಡದಿರುವುದು ಇದಕ್ಕೆ ಮತ್ತಷ್ಟು ಊಹಾಪೋಹಗಳಿಗೆ ಎಡೆ ಮಾಡಿತ್ತು.
ಕಳೆದ ಅನೇಕ ದಿನಗಳಿಂದ ದೇಶದಲ್ಲಿ ಉಗ್ರರು ಅಟ್ಟಹಾಸ ಮೆರೆಯುತ್ತಿದ್ದಾರೆ. ಹೈದರಾಬಾದ್, ಜೈಪುರ, ಬೆಂಗಳೂರು, ಅಹಮದಾಬಾದ್ ಹಾಗೂ ಕಳೆದ ಶನಿವಾರ ದೆಹಲಿಯಲ್ಲಿ ಸರಣಿ ಸ್ಫೋಟ ನಡೆದಿತ್ತು. ಸ್ಫೋಟದಲ್ಲಿ ನೂರಾರು ಅಮಾಯಕರು ಪ್ರಾಣ ತೆತ್ತರು. ಲೆಕ್ಕವಿಲ್ಲದಷ್ಟು ಮಂದಿ ಗಾಯಗೊಂಡಿದ್ದಾರೆ. ದೇಶದಾದ್ಯಂತ ಉಗ್ರರ ಜಾಲ ಅವ್ಯಾಹತವಾಗಿ ಬೆಳೆದಿದ್ದರೂ ಅದನ್ನು ಸಮರ್ಥವಾಗಿ ನಿಭಾಯಿಯಿಸಲು ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ವಿಫಲರಾಗಿದ್ದಾರೆ.
ಸಚಿವರ ನಿರ್ಲಕ್ಷ್ಯ ಹಾಗೂ ಇಲಾಖೆ ಅಸಮರ್ಥತೆಯಿಂದ ತಲೆ ತಗ್ಗಿಸಬೇಕಾದ ಪರಿಸ್ಥಿತಿ ಬಂದೊದಗಿತ್ತು. ಪ್ರತಿಪಕ್ಷಗಳು ಇದೇ ವಿಷಯವನ್ನು ಅಸ್ತ್ರವನ್ನಾಗಿಸಿಕೊಂಡು ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದವು. ಅಮರನಾಥ್ ಭೂವಿವಾದ ಹಾಗೂ ಒರಿಸ್ಸಾ ಗಲಭೆಯಲ್ಲಿ ಕೂಡಾ ಕೇಂದ್ರ ಸರ್ಕಾರದ ಲೋಪ ಎದ್ದು ಕಂಡಿದ್ದರಿಂದ ಸರ್ಕಾರ ತೀವ್ರ ಮುಜುಗರ ಅನುಭವಿಸಬೇಕಾಗಿತ್ತು. ಶಿವರಾಜ್ ಪಾಟೀಲ್ ಅವರ ಕಾರ್ಯಕ್ಷಮತೆ ಸೋನಿಯಾಗಾಂಧಿ ಹಾಗೂ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಲ್ಲಿ ಅಸಮಾಧಾನ ಮೂಡಿಸಿದ್ದರಿಂದ ಪಾಟೀಲ್ ಅವರ ತೆಲೆದಂಡವಾಗಲಿದೆ ಎನ್ನುವ ಸುದ್ದಿ ದಟ್ಟವಾಗಿದೆ.
(ದಟ್ಸ್
ಕನ್ನಡ
ವಾರ್ತೆ)
ಗೃಹಸಚಿವ
ಶಿವರಾಜ್
ಪಾಟೀಲ್
ತಲೆದಂಡ
?