ಯೋಧ ಶಿವಲಿಂಗಯ್ಯನಿಗೆ ಗೌರವಯುತ ಅಂತ್ಯ ಸಂಸ್ಕಾರ
ಜಮಖಂಡಿ, ಸೆ. 16 : ಜಮ್ಮುವಿನಲ್ಲಿ ಉಗ್ರರ ಜತೆ ನಡೆದ ಕಾಳಗದಲ್ಲಿ ಮೃತಪಟ್ಟಿರುವ ಸಿಆರ್ ಪಿಎಫ್ ಯೋಧ ಶಿವಲಿಂಗಯ್ಯ ಮಠಪತಿ(48) ಅವರ ಪಾರ್ಥೀವ ಶರೀರ ಇಂದು ಅವರ ಸ್ವಗ್ರಾಮ ತಾಲ್ಲೂಕಿನ ಕುಂಚನೂರಿಗೆ ಆಗಮಿಸಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಸಂಜೆ ಅಂತ್ಯಸಂಸ್ಕಾರ ನಡೆಸಲು ಜಿಲ್ಲಾಡಳಿತ ಮುಂದಾಗಿದೆ.
ಸೆ. 14 ರಂದು ಜಮ್ಮು ಮಾರುಕಟ್ಟೆ ಪ್ರದೇಶದಲ್ಲಿ ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಶಿವಲಿಂಗಯ್ಯ ಮೃತಪಟ್ಟಿದ್ದಾರೆ. 1988 ಸಿಆರ್ ಪಿಎಫ್ ಪಡೆಯನ್ನು ಸೇರಿಕೊಂಡಿದ್ದ ಅವರು, ದೇಶದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಿದ್ದರು. ಮುಂದಿನ ವರ್ಷ ಸೇವೆಯಿಂದ ನಿವೃತ್ತರಾಗಲಿದ್ದರು. ಆದರೆ ವಿಧಿಯಾಟ ಬೇರೆಯೇ ಇತ್ತು. ಅಪಾರ ಬಂದುಬಳಗವನ್ನು ಶಿವಲಿಂಗಯ್ಯ ಅಗಲಿದ್ದಾರೆ.
2001ರಲ್ಲಿ ನಡೆದ ಸಂಸತ್ ದಾಳಿಯಲ್ಲಿ ಉಗ್ರರ ಸೆದೆಬಡಿಯುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಶಿವಲಿಂಗಯ್ಯ , ಅಂದು ಮೂವರು ಉಗ್ರರನ್ನು ಹತ್ಯೆಗೈದಿದ್ದರು. ಇವರ ಸಾಧನೆಯನ್ನು ಪರಿಗಣಿಸಿದ ಕೇಂದ್ರ ಸರ್ಕಾರ ಮುಕ್ತ ಕಂಠದಿಂದ ಪ್ರಶಂಸಿಸಿ ಸನ್ಮಾನಿಸಿತ್ತು.
(ದಟ್ಸ್ ಕನ್ನಡ ವಾರ್ತೆ)