ಪಿಟೀಲು ವಾದಕ ಕುನ್ನಕುಡಿ ವೈದ್ಯನಾಥನ್ ವಿಧಿವಶ
ಚೆನ್ನೈ, ಸೆ. 9 : ಖ್ಯಾತ ಪಿಟೀಲು ವಾದಕ, ಪದ್ಮಶ್ರೀ ಪ್ರಶಸ್ತಿ ವಿಜೇತ ಕುನ್ನಕುಡಿ ವೈದ್ಯನಾಥನ್ (73)ಅವರು ಇಲ್ಲಿನ ಸಿಟಿ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ ಕೊನೆಯುಸಿರೆಳೆದರು. ಭಾರತದ ಶ್ರೇಷ್ಠ ಪಿಟೀಲು ವಾದಕರಲ್ಲಿ ಒಬ್ಬರೆಂದು ವೈದ್ಯನಾಥನ್ ಅವರನ್ನು ಗುರುತಿಸಲಾಗುತ್ತದೆ.
1935 ರಲ್ಲಿ ರಾಮಸ್ವಾಮಿ ಶಾಸ್ತ್ರಿ ಹಾಗೂ ಮೀನಾಕ್ಷಿ ದಂಪತಿಗಳಿಗೆ ಜನಿಸಿದರು. ಹಣೆಯಮೇಲೆ ವಿಭೂತಿ ಪಟ್ಟಿ, ಕುಂಕುಮ ಸದಾ ಧರಿಸುತ್ತಿದ್ದ ವೈದ್ಯನಾಥನ್ ಅವರು ಸಂಗೀತದ ಆರಾಧಕರಾಗಿದ್ದರು. ವೈದ್ಯನಾಥನ್ ಅವರ ತಂದೆ ಸಂಸ್ಕೃತ ವಿದ್ವಾಂಸರು, ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪರಿಣತರಾಗಿದ್ದರು. ತಂದೆಯಿಂದ ಸಂಗೀತದ ಓನಾಮ ಪ್ರಾರಂಭಿಸಿದ ವೈದ್ಯನಾಥನ್ ಅವರಿಗೆ ಸಂಗೀತದ ಜೊತೆಗೆ ವೇದಪಾಠ ಕೂಡ ಆಗುತ್ತಿತ್ತು.
12 ರ ಪ್ರಾಯದಲ್ಲೇ ವೈದ್ಯನಾಥನ್ ಅವರಿಗೆ ಸಂಗೀತ ದಿಗ್ಗಜರಾದ ಅರಿಯಕುಡಿ, ಶೆಮ್ಮಂಗುಡಿ ಹಾಗೂ ಮಹಾರಾಜಪುರಂ ಅವರ ಸಾಂಗತ್ಯ ದೊರೆಕಿತು.1976 ರವರೆಗೂ ಅನೇಕ ಶಾಸ್ತ್ರೀಯ ಗಾಯಕರಿಗೆ ಪಕ್ಕ ವಾದ್ಯದಲ್ಲಿ ಪಿಟೀಲಿನ ಸಾಥ್ ನೀಡಿದರು. ನಂತರ ಪ್ರತ್ಯೇಕವಾಗಿ ಕಛೇರಿ ನೀಡಲು ಆರಂಭಿಸಿದರು. ಸಂಗೀತಕ್ಕೆ ಚಿಕಿತ್ಸಕ ಗುಣಗಳಿವೆ ಎಂದು ನಂಬಿದ್ದರು.
ಸೇಲಂನ ಮಾರ್ಡನ್ ಥೇಟರ್ಸ್ ನಲ್ಲಿ ಚಲನಚಿತ್ರಗಳಿಗೆ ವಾದ್ಯ ಗೋಷ್ಠಿ ನುಡಿಸಲು ವೈದ್ಯನಾಥನ್ ಆರಂಭಿಸಿದರು. ಭಕ್ತಿ ಸಂಗೀತಕ್ಕೆ ಮೆರಗು ನೀಡಿದ ಅವರು ಹೆಚ್ ಎಂವಿ ಸಂಸ್ಥೆಗಾಗಿ ಫೀಲಾನ್ಸ್ ಸಂಗೀತ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದರು. ತಮಿಳಿನ ಅನ್ನಿಯನ್ ಸೇರಿದಂತೆ ಕೆಲವು ಚಿತ್ರಗಳಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದರು.
ಪದ್ಮಶ್ರೀ ,ಸಂಗೀತ ಮಾಮಣಿ, ರಾಮೋತ್ಸವ ಸೇವಾಮಂಡಲಿ ಪ್ರಶಸ್ತಿ ಸೇರಿದಂತೆ ಸುಮಾರು 200 ಕ್ಕೂ ಅಧಿಕ ಗೌರವ ಪ್ರಶಸ್ತಿಗಳನ್ನು ಪಡೆದಿದ್ದರು. ಬೆಂಗಳೂರಿನ ಚಾಮರಾಜಪೇಟೆಯ ವಾರ್ಷಿಕ ರಾಮನವಮಿ ಸಂಗೀತೋತ್ಸವದಲ್ಲಿ ಹಲವು ಬಾರಿ ಕಛೇರಿ ನೀಡಿ, ಸಂಗೀತ ರಸಿಕರ ಮನ ತಣಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)