7ನೇ ತರಗತಿವರೆಗೆ ಉಚಿತ ಬಸ್ ಪಾಸ್
ಬೆಂಗಳೂರು, ಸೆ. 8 : ನೂರು ದಿನಗಳ ಸಂಭ್ರಮ ಆಚರಿಸುತ್ತಿರುವ ಬಿಜೆಪಿ ಸರ್ಕಾರ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರಿಗೆ ಸಂಸ್ಥೆಯ ನೌಕರರಿಗೆ ಬಂಪರ್ ಕೊಡುಗೆ ನೀಡಿದೆ. ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ಗಳನ್ನು ಉಚಿತವಾಗಿ ನೀಡಿರುವ ಮಾದರಿಯಲ್ಲೇ ಏಳನೇ ತರಗತಿವರೆಗಿನ ವಿದ್ಯಾರ್ಥಿಗಳು ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ಉಚಿತವಾಗಿ ಶಾಲೆಗೆ ತೆರಳುವ ಯೋಜನೆಯನ್ನು ಸೋಮವಾರ ಘೋಷಿಸಿದೆ.
ರಾಜ್ಯದ ಯಾವುದೇ ಭಾಗದಲ್ಲಿ ಸಂಚರಿಸುವ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ 7ನೇ ತರಗತಿವರೆಗಿನ ವಿದ್ಯಾರ್ಥಿಗಳು ಉಚಿತವಾಗಿ ಶಾಲೆಗೆ ತೆರಳಬಹುದು ಎಂದು ಸಾರಿಗೆ ಸಚಿವ ಆರ್. ಅಶೋಕ್ ಸುದ್ದಿಗೋಷ್ಠಿಯಲ್ಲಿ ಇಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಶೇ. 35 ರಷ್ಟು ವಿದ್ಯಾರ್ಥಿಗಳು ಮಾತ್ರವೇ ಶಾಲೆಗೆ ತೆರಳುತ್ತಿದ್ದಾರೆ. ಈ ಸಂಖ್ಯೆಯನ್ನು ಹೆಚ್ಚಳ ಮಾಡುವ ಸಲುವಾಗಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ಅಲ್ಲದೇ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿರುವ ಹೆಣ್ಣು ಮಕ್ಕಳಿಗೆ ಪ್ರಯಾಣ ದರದಲ್ಲಿ ಶೇ. 25 ರಷ್ಟು ರಿಯಾಯಿತಿ ನೀಡಲಾಗುವುದು . ರಾಜ್ಯದ ಬಜೆಟ್ ನಲ್ಲಿ ಈಗಾಗಲೇ ಪ್ರಕಟಿಸಿದಂತೆ ಹಿರಿಯ ನಾಗಕರಿಗೆ ಬಸ್ ಪ್ರಯಾಣ ದರದಲ್ಲಿ ನೀಡಲಾಗಿರುವ ಶೇ. 25 ರಷ್ಟು ರಿಯಾಯಿತಿಯನ್ನು 3-5 ದಿನದೊಳಗೆ ಅನುಷ್ಠಾನಕ್ಕೆ ತರಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.
ಮುಂಗಡವಾಗಿ ಆಸನ ಕಾಯ್ದಿರಿಸಿದ ಶುಲ್ಕ 15 ರುಪಾಯಿಗಳಿಂದ ತಗ್ಗಿಸಲಾಗಿದೆ. 200 ರುಪಾಯಿ ಪ್ರಯಾಣ ದರ ಕಾಯ್ದಿರಿಸುವ ಶುಲ್ಕ 5 ರುಪಾಯಿ, ಹಾಗೂ 200 ಮೇಲ್ಪಟ್ಟು ಶುಲ್ಕ 10 ರುಪಾಯಿಗಳನ್ನು ಇಳಿಸಲಾಗಿದೆ. ಇದರಿಂದ ಸಂಸ್ಥೆಗೆ 3.04 ಕೋಟಿ ರುಪಾಯಿ ನಷ್ಟ ಉಂಟಾಗಲಿದೆ. ಎಸ್ಎಸ್ಎಲ್ ಸಿ. ಪಿಯುಸಿ ಹಾಗೂ ಪದವಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದ ನೌಕರರು ಮತ್ತು ಅಧಿಕಾರಿಗಳ ಮಕ್ಕಳಿಗೆ ನೀಡುತ್ತಿದ್ದ ನಗದು ಪುರಸ್ಕಾರ ಮೊತ್ತದಲ್ಲಿ ಹೆಚ್ಚಳ ಮಾಡಲಾಗಿದೆ ಎಂದು ಅಶೋಕ್ ತಿಳಿಸಿದರು.
ನಿಗಮದಲ್ಲಿ 2 ವರ್ಷಗಳ ತರಬೇತಿ ಮೇಲೆ ನಿಯೋಜಿಸಲಾಗುತ್ತಿರುವ ವಿವಿಧ ಸಿಬ್ಬಂದಿಗಳಿಗೆ ತರಬೇತಿ ಅವಧಿಯಲ್ಲಿ ನೀಡಲಾಗುತ್ತಿರುವ ತರಬೇತಿ ಭತ್ಯೆಯಲ್ಲಿ 500 ರುಪಾಯಿಗಳಿಂದ 800 ರುಪಾಯಿವರೆಗೆ ಹೆಚ್ಚಳ ಮಾಡಲಾಗಿದೆ ಎಂದು ಸಚಿವರು ಹೇಳಿದರು.
(ದಟ್ಸ್
ಕನ್ನಡ
ವಾರ್ತೆ)
ಬಿಜೆಪಿ
ವೈಫಲ್ಯ
ವಿರೋಧಿಸಿ
ಜೆಡಿಎಸ್
ಪ್ರತಿಭಟನೆ