394 ಕೋಟಿ ರು ಪರಿಹಾರಕ್ಕೆ ರೆಡ್ಡಿ ಮೊರೆ
ಬೆಂಗಳೂರು, ಸೆ. 01 : ಮುಂಗಾರು ಮಳೆಯ ಮುನಿಸಿನಿಂದಾಗಿ ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಟಿ ಯಿಂದಾಗಿ ಒಟ್ಟು 394 ಕೋಟಿ ರುಪಾಯಿಗಳ ಬೆಳೆ, ಅಸ್ತಿ-ಪಾಸ್ತಿ ನಷ್ಟವಾಗಿದೆ ಎಂದು ಕಂದಾಯ ಸಚಿವ ಕೆ.ಕರುಣಾಕರ ರೆಡ್ಡಿ ಹೇಳಿದ್ದಾರೆ. ರಾಜ್ಯಕ್ಕೆ ಆಗಿರುವ ನಷ್ಟವನ್ನು ಕೇಂದ್ರ ಶೀಘ್ರದಲ್ಲಿ ಪರಿಶೀಲನೆ ನಡೆಸಿ 600 ಕೋಟಿ ರುಪಾಯಿಗಳ ಪರಿಹಾರವನ್ನು ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಅವರು ಕೋರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಅತಿವೃಷ್ಟಿ ಪರಿಶೀಲನೆಗೆ ಕೇಂದ್ರ ಸರ್ಕಾರವು ಶೀಘ್ರದಲ್ಲಿ ಕೇಂದ್ರದ ನಿಯೋಗವೊಂದನ್ನು ಕಳುಹಿಸಿ ಪ್ಯಾಕೇಜ್ ನೀಡಬೇಕು ಎಂದಿದ್ದಾರೆ. ರಾಜ್ಯದ ಕೆಲ ಭಾಗಗಳಲ್ಲಿ ಕಳೆದ ವಾರದಿಂದ ಆರ್ಭಟಿಸುತ್ತಿರುವ ವರುಣನ ಅವಕೃಪೆ ಭಾರಿ ನಷ್ಟ ಉಂಟಾಗಿದೆ. 94705 ಎಕರೆ ಬೆಳೆ ಹೊಂದಿದ್ದ ಜಮೀನು ಸಂಪೂರ್ಣ ನಾಶವಾಗಿದೆ. 361 ಮನೆಗಳು ಪ್ರವಾಹದಲ್ಲಿ ಮುಳುಗಿವೆ. ನೂರಾರು ಗ್ರಾಮಗಳು ನೀರಿನಲ್ಲಿ ಜಲಾವೃತವಾಗಿವೆ. 74 ಮಂದಿ ಬಲಿಯಾಗಿದ್ದಾರೆ.
ಇದರಿಂದ ಒಟ್ಟು 394 ಕೋಟಿ ರುಪಾಯಿ ನಷ್ಟವಾಗಿದ್ದು, ರಾಜ್ಯ ಸರ್ಕಾರದ ಮೇಲೆ 188 ಕೋಟಿ ರುಪಾಯಿಗಳ ಹೆಚ್ಚುವರಿ ಹೊರೆ ಬೀಳಲಿದೆ. ಆದ್ದರಿಂದ ರಾಜ್ಯದಲ್ಲಿ ಅತಿವೃಷ್ಟಿ ಯಿಂದ ಆಗಿರುವ ನಷ್ಟವನ್ನು ನೀಗಿಸಲು ರಾಜ್ಯ ಸರ್ಕಾರಕ್ಕೆ ಶೀಘ್ರದಲ್ಲಿ 600 ಕೋಟಿ ಪರಿಹಾರವನ್ನು ಬಿಡುಗಡೆ ಮಾಡಬೇಕು ಎಂದು ಕರುಣಾಕರರೆಡ್ಡಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕಳೆದ ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಾಸನ, ಮಡಿಕೇರಿ, ಮಂಗಳೂರು ಸೇರಿದಂತೆ ಕರಾವಳಿ ಅನೇಕ ಪ್ರದೇಶಗಳು ನೀರಿನಲ್ಲಿ ಮುಳುಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ:
ಬಿಹಾರ ಸಂತ್ರಸ್ಥರಿಗೆ ಸಹಾಯಹಸ್ತ ಚಾಚಿದ ಸರ್ಕಾರ
ಮಳೆಯ ಅಬ್ಬರಕ್ಕೆ ದಕ್ಷಿಣ ಒಳನಾಡಿನಲ್ಲಿ 5 ಸಾವು
ರಾಜ್ಯದ 84 ತಾಲೂಕುಗಳು ಬರಪೀಡಿತ:ಕರುಣಾಕರರೆಡ್ಡಿ
ನೀರಕಟ್ಟೆ ಪ್ರವಾಹಕ್ಕೆ ಕೊಚ್ಚಿ ಹೋದ 6 ಮಂದಿ












Click it and Unblock the Notifications