ಕಾಂಗ್ರೆಸ್ ನ ಆಪರೇಷನ್ ಹಸ್ತಕ್ಕೆ ಬಿಜೆಪಿ ಸ್ವಾಗತ
ಬೆಂಗಳೂರು, ಸೆ. 1 : ಆಪರೇಷನ್ ಕಮಲಕ್ಕೆ ಪ್ರತಿಯಾಗಿ ಆಪರೇಷನ್ ಹಸ್ತವನ್ನು ನಡೆಸುವುದು ನಮಗೂ ಗೊತ್ತಿದೆ ಎಂದು ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ ನೀಡಿದ್ದ ಹೇಳಿಕೆಯನ್ನು ಬಿಜೆಪಿ ರಾಜ್ಯಾದ್ಯಕ್ಷ ಡಿ.ವಿ. ಸದಾನಂದಗೌಡ ಸ್ವಾಗತಿಸಿದ್ದಾರೆ. ಅವನತಿಯ ಹಾದಿಯಲ್ಲಿರುವ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲು ಮನಸ್ಸಿರುವ ಶಾಸಕರನ್ನು ಪಕ್ಷಕ್ಕೆ ಸೆಳೆದುಕೊಳ್ಳಲಿ ಎಂದು ಅವರು ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್, ಜೆಡಿಎಸ್ ಪಕ್ಷದಲ್ಲಿದ್ದರೆ ಭವಿಷ್ಯವಿಲ್ಲ ಎನ್ನುವುದನ್ನು ಅರಿತ ಶಾಸಕರು ಸಾಲುಸಾಲಾಗಿ ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದರು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಂದ ಬಿಜೆಪಿ ಸೇರ್ಪಡೆಗೊಂಡಿರುವ ಯಾವ ಶಾಸಕರಿಗೂ ಒತ್ತಾಯ ಮಾಡಿಲ್ಲ. ಪಕ್ಷದ ಸಿದ್ಧಾಂತಕ್ಕೆ ನಿಷ್ಠೆ, ಹಾಗೂ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿ ಸೇರಿದ್ದಾರೆ ಎಂದು ಹೇಳಿದರು.
ಪಕ್ಷಕ್ಕೆ ಬರುವವರಿಗೆ ಬೇಡ ಎನ್ನಲಿಕ್ಕಾಗುತ್ತದೆಯೇ ಎಂದು ಪ್ರಶ್ನಿಸಿದ ಸದಾನಂದಗೌಡರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಇನ್ನೊಂದು ಪಕ್ಷಕ್ಕೆ ಸೇರುತ್ತಿರುವುದು ರಾಜ್ಯ ರಾಜಕಾರಣದಲ್ಲಿ ಹೊಸದೇನಲ್ಲ ಎಂದು ಹೇಳಿದರು. ಪಕ್ಷ ಸೇರ್ಪಡೆಯಾದವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವುದು ನಮ್ಮ ಜವಾಬ್ದಾರಿಯಾಗಿದೆ. ಅವರವರ ಅರ್ಹತೆಯ ಆಧಾರದ ಮೇಲೆ ಸ್ಥಾನ ನೀಡಲಾಗಿದೆ ಎಂದು ಹೇಳಿದರು.
ಭಾನುವಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ, ಆಪರೇಷನ್ ಕಮಲದಂತೆ ನಮಗೂ ಆಪರೇಷನ್ ಹಸ್ತ ಕಾರ್ಯಚರಣೆ ಮಾಡಲಿಕ್ಕೆ ಬರುತ್ತದೆ. ಸೂಕ್ತ ಸಮಯದಲ್ಲಿ ಆ ಕಾರ್ಯಚರಣೆಗೆ ಉತ್ತರ ನೀಡುತ್ತವೆ ಎಂದು ಕಿಡಿಕಾರಿದ್ದರು. ಬಿಜೆಪಿಯು ಆಪರೇಶನ್ ಕಮಲ ಎಂಬ ಹೆಸರಿಟ್ಟು ನಾಚಿಕೆಯಿಲ್ಲದೆ ಅನ್ಯ ಪಕ್ಷಗಳ ಶಾಸಕರಿಗೆ ವಿವಿಧ ಅಮಿಷವೊಡ್ಡಿ ಖರೀದಿ ಮಾಡಿರುವುದು ಖಂಡನೀಯ ಕೆಲಸ ಎಂದು ಬಿಜೆಪಿ ನಾಯಕರ ವಿರುದ್ಧ ತೀವ್ರ ಅವರು ವಾಗ್ದಾಳಿ ನಡೆಸಿದ್ದರು.
(ದಟ್ಸ್ ಕನ್ನಡ ವಾರ್ತೆ)
ಕಾಂಗ್ರೆಸ್ನಿಂದ ಆಪರೇಶನ್ ಹಸ್ತ