ಬಾಗಲಕೋಟೆಯಲ್ಲೊಬ್ಬ ಆಧುನಿಕ ಬೇಡರ ಕಣ್ಣಪ್ಪ
ಬಾಗಲಕೋಟೆ, ಆ.28: ನಾನಾ ವಿಧವಾಗಿ ದೇವರಿಗೆ ಹರಕೆ ತೀರಿಸಿಕೊಳ್ಳುವವರನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಭಕ್ತ ತನ್ನ ಕಣ್ಣನ್ನೇ ಕಿತ್ತು ದೇವರಿಗೆ ಅರ್ಪಿಸಿ ಕಲಿಯುಗ ಬೇಡರ ಕಣ್ಣಪ್ಪನಾಗಲು ಹೊರಟ ಕಥೆ ಇಲ್ಲಿದೆ.
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಅಡಕ ಗ್ರಾಮದ ಮುದಕಪ್ಪ ಯಲ್ಲಪ್ಪ ಕರಡಿ(55) ಎಂಬಾತ ಅದೇ ಊರಿನ ಶಂಕರಜ್ಜನ ಪರಮ ಭಕ್ತ. ಬುಧವಾರ ರಾತ್ರಿ ಕನಸಿನಲ್ಲಿ ಬಂದ ದಿಗಂಬರ ಮಠದ ಶಂಕರಜ್ಜ ನಿನ್ನ ಬಲಗಣ್ಣನ್ನು ತನಗೆ ಸಮರ್ಪಿಸುವಂತೆ ಕೇಳಿದನಂತೆ. ಮಠಕ್ಕೆ ಹೋದ ಮುದಕಪ್ಪ ತನ್ನ ಹೆಬ್ಬೆರಳಿನಿಂದ ಕಣ್ಣನ್ನು ಕಿತ್ತು ಶಂಕರಜ್ಜನಿಗೆ ಸಮರ್ಪಿಸಿದ್ದಾನೆ. ಈ ಸಂದರ್ಭದಲ್ಲಿ ಆತ ನೋವಿನಿಂದ ಕಿರುಚಿದ್ದು ಕೇಳಿದ ಊರಿನ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಮುದಕಪ್ಪನ ಪರಿಸ್ಥಿತಿಯನ್ನು ನೋಡಿ ದಿಗ್ಭ್ರ್ರಾಂತರಾದರು. ನಂತರ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರು.
ಈ ಆಧುನಿಕ ಕಣ್ಣಪ್ಪನ ಗಾಢ ಭಕ್ತಿ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಈತನ ದರ್ಶನಕ್ಕೆಂದು ಬಾದಾಮಿ ಆಸ್ಪತ್ರೆ ಮುಂದೆ ಜನಜಾತ್ರೆಯೇ ನೆರೆದಿದೆ. ಈ ಆಧುನಿಕ ಕಾಲದಲ್ಲೂ ಮೌಢ್ಯತನವನ್ನು ಪ್ರದರ್ಶಿಸಿರುವ ಈತನ ಮೂಢ ಭಕ್ತಿಯನ್ನು ಕಂಡು ಜನ ದಂಗಾಗಿದ್ದಾರೆ.
(ದಟ್ಸ್ಕನ್ನಡ ವಾರ್ತೆ)