ರೇಣುಕ ಎಬ್ಬಿಸಿದ ಬಿರುಗಾಳಿಗೆ ಕನಲಿದ ಕಮಲ
ಬೆಂಗಳೂರು, ಆ. 27 : ಯಡಿಯೂರಪ್ಪ ಮತ್ತು ಸಚಿವರ ನಿಯೋಗ ತಂಡ ಅಕ್ಕ ಸಮ್ಮೇಳನಕ್ಕಾಗಿ ಅಮೆರಿಕ ವಿಮಾನ ಏರುವ ಮೊದಲೆ ಆಪರೇಷನ್ ಕಮಲದ ದೆಸೆಯಿಂದಾಗಿ ಬಿಜೆಪಿ ಬಿರುಗಾಳಿಯ ಹೊಡೆತಕ್ಕೆ ಸಿಕ್ಕಿದೆ.
ಆಪರೇಶನ್ ಕಮಲದ ಹೆಸರಿನಲ್ಲಿ ಅನ್ಯ ಪಕ್ಷಗಳ ಶಾಸಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದ ಬಿಜೆಪಿಯಲ್ಲೀಗ ಬಂಡಾಯ ಸ್ಫೋಟಗೊಂಡಿದೆ. ಆಪರೇಷನ್ ಕಮಲದಿಂದ ಬೇಸತ್ತಿರುವ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ನೇತೃತ್ವದ ಎಂಟು ಮಂದಿ ಬಿಜೆಪಿ ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ಸುನಿಲ್ ವಲ್ಲಾಪುರೆ, ಎಂ.ಪಿ.ಹರೀಶ್ ಹಾಗೂ ಚಂದ್ರಶೇಖರ ಪಾಟೀಲ್ ರೇವೂರು ರಾಜೀನಾಮೆ ಸಲ್ಲಿಸಲು ಮುಂದಾಗಿದ್ದಾರೆ. ಉಳಿದ ಶಾಸಕರ ಹೆಸರು ಬಹಿರಂಗಗೊಂಡಿಲ್ಲ. ಈ ಶಾಸಕರು ಇಂದು ಸ್ಪೀಕರ್ ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಅಸಮಾಧಾನಗೊಂಡಿರುವ ಈ ಶಾಸಕರನ್ನು ಶೆಟ್ಟರ್ ಸಮಾಧಾನ ಪಡಿಸಿ ರಾಜೀನಾಮೆ ನೀಡದಿರುವಂತ ಮನವೊಲಿಸುವ ಪ್ರಯತ್ನದಲ್ಲಿದ್ದಾರೆ ಎನ್ನಲಾಗಿದೆ.
ಕಳೆದ ಕೆಲ ದಿನಗಳಿಂದ ಆಪರೇಶನ್ ಕಮಲ ಹೆಸರಿನಲ್ಲಿ ಅನ್ಯ ಪಕ್ಷಗಳ ಶಾಸಕರನ್ನು ಪಕ್ಷಕ್ಕೆ ಕರೆ ತಂದು ಸಂಪುಟದಲ್ಲಿ ಸ್ಥಾನ ಕಲ್ಪಿಸಲಾಗುತ್ತಿದೆ. ಇದರಿಂದ ಬೇಸತ್ತಿದ್ದ ಕೆಲವು ಬಿಜೆಪಿ ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕ್ರಮವನ್ನು ಬಲವಾಗಿ ವಿರೋಧಿಸಿದ್ದರು. ಈ ಸಂಬಂಧ ಕೇಂದ್ರ ವರಿಷ್ಠರಿಗೆ ದೂರು ನೀಡಿ ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದರು. ರಾಜ್ಯ ನಾಯಕರಿಂದ ಆಗಿರುವ ಆನ್ಯಾಯವನ್ನು ಶೀಘ್ರದಲ್ಲಿ ಬಗೆಹರಿಸಲಾಗುವುದು. ಸಂಪುಟದಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹಾಗೂ ಶಾಸಕರಿಗೆ ಸ್ಥಾನ ಕಲ್ಪಿಸಲಾಗುವುದು ಎನ್ನುವ ಕೇಂದ್ರದ ಭರವಸೆ ಬರೀ ಭರವಸೆಯಾಗಿ ಉಳಿಯಿತು.ಯಡಿಯೂರಪ್ಪ ಅನ್ಯ ಪಕ್ಷಗಳ ಶಾಸಕರ ಬೇಟೆಯನ್ನು ಮುಂದುವರೆಸಿದರು ಇದರಿಂದ ತೀವ್ರ ವಿರೋಧಿವೂ ವ್ಯಕ್ತವಾಯಿರು.
ಆಪರೇಷನ್ ಕಮಲದ ಫಲವಾಗಿ ಕಾಂಗ್ರೆಸ್ನ ಆನಂದ ಆಸ್ನೋಟಿಕರ್, ಶಿವನಗೌಡ ನಾಯಕ್, ಬಾಲಚಂದ್ರ ಜಾರಕಿಹೊಳಿ, ನಟ ಜಗ್ಗೇಶ್, ಗೌರಿಶಂಕರ್, ಉಮೇಶ್ ಕತ್ತಿ ಸೇರಿದಂತೆ ಏಳು ಶಾಸಕರು ಬಿಜೆಪಿ ಬಲೆಗೆ ಬಿದ್ದರು. ಮೊದಲು ಬಂದ ಮೂವರಾದ ಆಸ್ನೋಟಿಕರ್, ಜಾರಕಿಹೊಳಿ ಹಾಗೂ ಶಿವನಗೌಡ ನಾಯಕ್ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಇದರಿಂದ ಕೆರಳಿದ ಬಿಜೆಪಿ ಶಾಸಕರು ತಮಗೆ ಅನ್ಯಾಯವಾಗುತ್ತಿದೆ ಎಂದು ಖಾಸಗಿ ಹೊಟೇಲ್ನಲ್ಲಿ ಸಭೆ ಸೇರಿ ಯಡಿಯೂರಪ್ಪ ಅವರ ವಿರುದ್ಧ ಕಿಡಿಕಾರಿದ್ದರು. ನಂತರ ಪಕ್ಷದ ವರಿಷ್ಠರು ಅವರನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾಗಿದ್ದರು.
ಆದರೆ ಸಚಿವ ಸಂಪುಟದ ಪುಣ್ಯ ಕೋಟಿ ಸಚಿವರೆಂದೇ ಹೆಸರುವಾಸಿಯಾಗಿದ್ದ ಸಜ್ಜನ ರಾಜಕಾರಣಿ ಎಸ್.ಕೆ.ಬೆಳ್ಳುಬ್ಬಿ ಅವರ ರಾಜೀನಾಮೆ ಪಡೆದು ಪಕ್ಷಾಂತರಿ ಉಮೇಶ ಕತ್ತಿಗೆ ಸಂಪುಟದಲ್ಲಿ ಸ್ಥಾನ ನೀಡಿದ್ದು, ಬಿಜೆಪಿ ಶಾಸಕರಿಗೆ ನುಂಗಲಾರದ ತುತ್ತಾಯಿತು. ಇಂದು ಉಮೇಶ್ ಕತ್ತಿ ರಾಜಭವನದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುತ್ತಿದ್ದರೆ, ಇದರ ಬೆನ್ನಲ್ಲೇ ಅತ್ತ ಯಡಿಯೂರಪ್ಪ ವಿರುದ್ಧ ಕತ್ತಿ ಮಸೆತ ಆರಂಭವಾಯಿತು. ಯಡಿಯೂರಪ್ಪ ವಿರುದ್ಧ ರೇಣುಕಾಚಾರ್ಯ ನೇತೃತ್ವದ ಎಂಟು ಮಂದಿ ಬಿಜೆಪಿ ಶಾಸಕರು ಬಂಡಾಯದ ಬಾವುಟ ಹಾರಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನುವ ಸುದ್ದ ದಟ್ಟವಾಗಿದೆ. ಮುಂದಿನ ದಿನಗಳಲ್ಲಿ ಸಮಸ್ಯೆ ಮತ್ತಷ್ಟು ಜಟಿಲವಾಗುವ ಲಕ್ಷಣ ಕಂಡು ಬರತೊಡಗಿವೆ. ಇಂದು ರಾತ್ರಿ ಯಡಿಯೂರಪ್ಪ ನೇತೃತ್ವದ ನಿಯೋಗ ಅಮೆರಿಕದಲ್ಲಿ ನಡೆಯಲಿರುವ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸುವ ಸಲುವಾಗಿ ತೆರಳುವ ಸಿದ್ಧತೆಯಲ್ಲಿದೆ. ಆದರೆ ಎಂಟು ಶಾಸಕರ ರಾಜೀನಾಮೆ ನೀಡಿರುವ ಸುದ್ದಿ ಯಡಿಯೂರಪ್ಪ ಅವರಿಗೆ ಬರಸಿಡಿನಂತೆ ಎರಗಿದೆ.
(ದಟ್ಸ್ ಕನ್ನಡ ವಾರ್ತೆ)
ಉಮೇಶ್ ಕತ್ತಿಗೆ ತೋಟಗಾರಿಕೆ ಖಾತೆ ಸಂಭವ