ದಸರಾ ಕ್ರೀಡಾಕೂಟ ಉದ್ಘಾಟನೆಗೆ ಅಭಿನವ್ ಬಿಂದ್ರಾ
ಮೈಸೂರು, ಆ. 28 : ಐತಿಹಾಸಿಕ ದಸರಾ ಹಬ್ಬವನ್ನು ವೈಭವಯುತವಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಚೀನಾದಲ್ಲಿ ಜರುಗಿದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗಳಿಸಿರುವ ಬಂಗಾರದ ಬೇಟೆಗಾರ ಅಭಿನವ್ ಬಿಂದ್ರಾ ಅವರು ದಸರಾ ಕ್ರೀಡಾಕೂಟವನ್ನು ಹಾಗೂ ಕುಸ್ತಿ ಪಂದ್ಯಾವಳಿಗಳನ್ನು ಉದ್ಘಾಟಿಸಲು ಕಂಚು ಪದಕ ವಿಜೇತ ಸುಶೀಲ್ ಕುಮಾರ್ ಅವರನ್ನು ಆಹ್ವಾನಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವೆ ಹಾಗೂ ಮೈಸೂರು ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಹಬ್ಬ ದಸರಾವನ್ನು ಇನ್ನಷ್ಟು ಅರ್ಥಪೂರ್ಣವಾಗಿ ಆಚರಿಸಲು ಸರ್ಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಿದೆ ಎಂದರು. ದಸರಾ ಅಂಬಾರಿ ವಿವಾದಕ್ಕೆ ಸಂಬಂಧಿಸಿದಂತೆ ಅರಣ್ಯ ಅಧಿಕಾರಿಗಳು ಹಾಗೂ ವೈದ್ಯಕೀಯ ವರದಿ ಬಂದ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದ ಅವರು, ದಸರಾ ಹಬ್ಬವನ್ನು ವ್ಯವಸ್ಥಿತವಾಗಿ ನಡೆಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ 21 ಸಮಿತಿಗಳ ರಚಿಸಿ ಸಮಿತಿಯ ಅಧ್ಯಕ್ಷ, ಉಪಾಧ್ಯಕ್ಷ ಪಟ್ಟಿ ಬಿಡುಗಡೆಗೊಳಿಸಲಾಗಿದೆ ಎಂದು ಹೇಳಿದರು.
ಮೈಸೂರು ದಸರಾದ ಕ್ರೀಡಾಕೂಟಕ್ಕೆ ಪ್ರತಿವರ್ಷ ಹೆಸರಾಂತ ಕ್ರೀಡಾಪಟುವನ್ನು ಕರೆಸಿ, ಉದ್ಘಾಟನೆ ಮಾಡಿಸುವುದು ವಾಡಿಕೆ. ಅದರಂತೆ ಇತ್ತೀಚೆಗೆ ಚೀನಾದ ಬೀಜಿಂಗ್ ನಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೂರು ಪದಕಗಳನ್ನು ತಂದು ಹೆಮ್ಮೆಯ ಕ್ರೀಡಾಳುಗಳಿಗೆ ಆಹ್ವಾನ ನೀಡಲಾಗಿದೆ. ಒಲಿಂಪಿಕ್ಸ್ ನಲ್ಲಿ ಶೂಟಿಂಗ್ ನಲ್ಲಿ ಆಭಿನವ್ ಬಿಂದ್ರಾಗೆ ಚಿನ್ನ, ಸುಶೀಲ್ ಕುಮಾರ್ ಗೆ ಕುಸ್ತಿಯಲ್ಲಿ ಕಂಚು, ಹಾಗೂ ವಿಜೇಂದರ್ ಕುಮಾರ್ ಗೆ ಬಾಕ್ಸಿಂಗ್ ನಲ್ಲಿ ಕಂಚು ಪದಕವನ್ನು ಪಡೆದುಕೊಂಡಿದ್ದರು.
(ದಟ್ಸ್ ಕನ್ನಡ ವಾರ್ತೆ)