ಗೋಕರ್ಣ : ಹಸ್ತಾಂತರದ ಹುತ್ತಕ್ಕೆ ಕೈ ಹಾಕಿದ ದೇವೇಗೌಡ
ಚಿಕ್ಕಮಗಳೂರು, ಆ. 27 : ರಾಮಚಂದ್ರಾಪುರ ಮಠಕ್ಕೆ ಐತಿಹಾಸಿಕ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿರ್ಧಾರಕ್ಕೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ತನ್ನ ನಿಲುವನ್ನು ಪುನರ್ ಪರಿಶೀಲನೆ ನಡೆಸಬೇಕಾಗಿದೆ ಎಂದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರ್ಕಾರ ಗೋಕರ್ಣ ದೇವಾಲಯದ ಹಸ್ತಾಂತರ ವಿಷಯದಲ್ಲಿ ಅತ್ಯಂತ ಕೆಟ್ಟ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಕಿಡಿಕಾರಿದ ಗೌಡರು, ಜನರ ವಿರೋಧದ ನಡುವೆ ಹಸ್ತಾಂತರ ಪ್ರಕ್ರಿಯೆ ಮುಂದುವರೆದಲ್ಲಿ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಐತಿಹಾಸಿಕ ಗೋಕರ್ಣ ದೇವಾಲಯವನ್ನು ಯಾರನ್ನು ಕೇಳಿ ಹಸ್ತಾಂತರ ಚಾಲನೆ ನೀಡಿದರು ಎಂದು ಪ್ರಶ್ನಿಸಿದ ಗೌಡರು, ಹಸ್ತಾಂತರ ಮಾಡಲೇ ಬೇಕು ಎಂದಾದಲ್ಲಿ ಗೋಕರ್ಣ ಮಠದ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತಗೆದುಕೊಂಡು ಶಾಂತಿಯುತವಾಗಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು. ಅಲ್ಲದೇ ಅಜ್ಜಂಪುರದಲ್ಲಿರುವ ಅಮೃತಮಹಲ್ ಸಂರಕ್ಷಣಾ ಕೇಂದ್ರದ ಹಸ್ತಾಂತರಕ್ಕೂ ತಮ್ಮ ವಿರೋಧವಿದೆ ಎಂದು ಸ್ಪಷ್ಟಪಡಿಸಿದ ಅವರು, ವಿರೋಧಿದ ನಡುವೆ ಹಸ್ತಾಂತರಕ್ಕೆ ಮುಂದಾದಲ್ಲಿ ಪಕ್ಷದ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಜೇನುಗೂಡಿಗೆ ದೇವೇಗೌಡರು ಕೈಹಾಕಿದ್ದು, ಸಮಸ್ಯೆ ಮತ್ತಷ್ಟು ಜಟಿಲವಾಗುವ ಸಾಧ್ಯತೆಗಳಿವೆ.
ಐತಿಹಾಸಿಕ ಗೋಕರ್ಣ ಮಹಾಬಲೇಶ್ವರ ದೇವಸ್ಥಾನವನ್ನು ಶಿವಮೊಗ್ಗದ ರಾಮಚಂದ್ರಾಪುರ ದೇವಾಲಯ ರಾಘವೇಶ್ವರ ಸ್ವಾಮೀಜಿಗಳು ತಮ್ಮ ವಶಕ್ಕೆ ತೆಗೆದುಕೊಳ್ಳಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಗೋಕರ್ಣದಲ್ಲಿ ಉಪಾಧಿವಂತರು, ವಿದ್ವಾಂಸರು, ಭಕ್ತಾಧಿಗಳಿಂದ ತೀವ್ರ ಪ್ರತಿಭಟನೆ ನಡೆಸಿದ್ದರು. ಕಳೆದ ಕೆಲ ದಿನಗಳಿಂದ ಹಸ್ತಾಂತರ ವಿಷಯ ತೀವ್ರ ಚರ್ಚೆಯಲ್ಲಿದೆ. ಪರವಿರೋಧಗಳು ಹುಟ್ಟಿಕೊಂಡಿವೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ:
ರಾಮಚಂದ್ರಾಪುರ ಮಠದ 'ಗೋಕರ್ಣ' ಕರ್ಮಕಾಂಡ
ಗೋಕರ್ಣ ವಿವಾದ ಕುರಿತು ಪ್ರತಾಪ್ ಸಿಂಹ












Click it and Unblock the Notifications