ಒರಿಸ್ಸಾ: ಹಿಂದು-ಕ್ರೈಸ್ತರ ಗಲಭೆ, ನಿಷೇಧಾಜ್ಞೆ, 10 ಸಾವು
ಭುವನೇಶ್ವರ, ಆ. 27 : ವಿಶ್ವ ಹಿಂದು ಪರಿಷತ್ತಿನ ಲಕ್ಷ್ಮಣಾನಂದ ಸರಸ್ವತಿ ಸ್ವಾಮಿ ಅವರ ಹತ್ಯೆಯ ಹಿನ್ನೆಲೆಯಲ್ಲಿ ಉಂಟಾದ ಗಲಭೆಯನ್ನು ಹತ್ತಿಕ್ಕಲು ಹೇರಲಾಗಿದ್ದ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸಲು ಮುಂದಾದ ಪ್ರತಿಭಟನಾಕಾರ ಮೇಲೆ ಪೊಲೀಸರು ಗೋಲಿಬಾರ್ ನಡೆಸಿರುವುದು ಸೇರಿ ಇಲ್ಲಿಯವರೆಗೆ ಒಟ್ಟು 10 ಮಂದಿ ಮೃತಪಟ್ಟಿರುವ ವರದಿಯಾಗಿದೆ.
ಕಂದಮಾಲ್ ಜಿಲ್ಲೆಯ ಬಾರಕಾಮ್ ನ ಪ್ರಾರ್ಥನಾ ಸ್ಥಳದಲ್ಲಿ ನಾಲ್ಕು ಜನರನ್ನು ಹತ್ಯೆ ಮಾಡಲಾಗಿದೆ. ರೈಕಿಯಾ ಪ್ರದೇಶದ ಮೂರು ಗುಡಿಸಲಿಗೆ ಬೆಂಕಿ ಹಚ್ಚಲಾಗಿದ್ದರಿಂದ ಮೂರು ಮಂದಿ ಸಾವನ್ನಪ್ಪಿದ್ದಾರೆ. ಬಾರ್ ಗಢ್ ಪ್ರದೇಶದಲ್ಲಿ ಕ್ರೈಸ್ತ ಸನ್ಯಾಸಿನಿಯೊಬ್ಬರನ್ನು ಸಜೀವ ದಹನ ಮಾಡಲಾಯಿತು. ಹಾಗೂ ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ನಡೆಸಲು ಮುಂದಾಗ ಪ್ರತಿಭಟನಾಕಾರರ ಮೇಲೆ ಗೋಲಿಬಾರ್ ನಡೆಸಿದ್ದರಿಂದ ಇಬ್ಬರು ಮೃತಪಟ್ಟಿದ್ದಾರೆ. ಈ ಮೂಲಕ ಕಳೆದ ಶನಿವಾರ ಲಕ್ಷ್ಮಣಾನಂದ ಸರಸ್ವತಿ ಸ್ವಾಮೀಜಿ ಹತ್ಯೆಯಾದಾಗಿನಿಂದ ಇಲ್ಲಿಯವರೆಗೆ ಒಟ್ಟು 10 ಮಂದಿ ಸಾವನ್ನಪ್ಪಿದ್ದಾರೆ.
ರಾಜ್ಯ ಅನೇಕ ಭಾಗಗಲ್ಲಿ ನಿಷೇಧಾಜ್ಞೆಯನ್ನು ಮುಂದುವರೆಸಲಾಗಿದೆ. ಕೇಂದ್ರಿಯ ಪಡೆ, ಶಸಸ್ತ್ರ ಮೀಸಲು ಪಡೆ ಹಾಗೂ ಸ್ಥಳೀಯ ಪೊಲೀಸರು ವಾತಾವರಣವನ್ನು ತಿಳಿಗೊಳಿಸಲು ಹರಸಾಹಸ ಮಾಡುತ್ತಿದ್ದಾರೆ. ಧಾರ್ಮಿಕ ಮುಖಂಡರು ಅಲ್ಲಲ್ಲಿ ಶಾಂತಿಸಭೆ ನಡೆಸಿ ಸೌಹಾರ್ಧ ಮೂಡಿಸಲು ಪ್ರಯತ್ನ ನಡೆಸಿದ್ದಾರೆ. ವಿಎಚ್ ಪಿ ಸಂಘಟನೆ ಒರಿಸ್ಸಾ ಬಂದ್ ಕರೆ ನೀಡಿದ ನಂತರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ನಾಲ್ಕು ದಿನಗಳ ಕಾಲ ನಿರಂತರವಾಗಿ ಸಂಘರ್ಷ ನಡೆದಿದೆ.
ಕಂದಮಾಲ್ ಜಿಲ್ಲೆಯಲ್ಲಿನ ಕ್ರೈಸ್ತ ಸನ್ಯಾನಿಸಿಯೊಬ್ಬರನ್ನು ಜೀವಂತ ದಹನ ಘಟನೆ ಸಂಬಂಧಿಸಿದಂತೆ ಕ್ರೈಸ್ತ ಮಿಷನರಿಗಳು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದವು. ಪುಲ್ ಭಾನಿ, ಬಾಲಿಗುಡ್, ತುಂಬ್ದಿಬಂದ್, ನೋಗಾವ್, ಬಾರ್ ಗಢ್, ಸುಂದರ್ ಗಢ್, ಕೋರಾಪುಟ್, ಬೋದಾ, ಸಂಬಲ್ ಪುರ್ ಪ್ರದೇಶಗಳಲ್ಲಿ ನಿಷೇಧಾಜ್ಞೆಯನ್ನು ಮುಂದುವರೆಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಪಟ್ನಾಯಕ್ ತಲೆದಂಡಕ್ಕೆ ಕ್ರೈಸ್ತ ಮಿಷನರಿಗಳ ಆಗ್ರಹ
ಓರಿಸ್ಸಾ : ಕ್ರೈಸ್ತ ಸನ್ಯಾಸಿನಿ ಸಜೀವ ದಹನ












Click it and Unblock the Notifications