ಯಡಿಯೂರಪ್ಪ ಮುಂದೆ, ಶೋಭಾ ಕರಂದ್ಲಾಜೆ ಹಿಂದೆ!
ಬೆಂಗಳೂರು, ಆ. 23 : ತೀವ್ರ ವಿವಾದಕ್ಕೆ ಒಳಗಾಗಿರುವ ಕರ್ನಾಟಕ ಶಾಸಕರ ಅಮೆರಿಕ ಪ್ರವಾಸದಿಂದ ಮತ್ತಷ್ಟು ಮುಜುಗರಕ್ಕೆ ಒಳಗಾಗುವ ಮೊದಲೇ ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ ಶಿಕಾಗೋದಲ್ಲಿ ನಡೆಯುತ್ತಿರುವ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನಕ್ಕೆ ತೆರಳದಿರುವುದಾಗಿ ನಿರ್ಧರಿಸಿದ್ದಾರೆ.
ಈ ಸಮ್ಮೇಳನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮಾತ್ರ ಅಧಿಕೃತ ಆಹ್ವಾನವಿದೆ. ಅಮೆರಿಕದಲ್ಲಿರುವ ಶ್ರೀಮಂತ ಉದ್ಯಮಿಗಳನ್ನು ಕರ್ನಾಟಕದಲ್ಲಿ ಹಣ ತೊಡಗಿಸಲು ಪ್ರೇರೇಪಿಸುವ ಉದ್ದೇಶದಿಂದ ಅಲ್ಲಿಗೆ ತೆರಳುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ, ಅಲ್ಲಿ ಗ್ರಾಮೀಣಾಭಿವೃದ್ಧಿ ಸಚಿವೆಗೆ ಏನು ಕೆಲಸ? ಗ್ರಾಮೀಣಾಭಿವೃದ್ಧಿಗೆ ಅಲ್ಲಿಂದ ತಿಳಿದುಕೊಂಡುಬರುವುದಾದರೂ ಏನು? ಎಂಬ ಪ್ರಶ್ನೆಗಳು ಸಹಜವಾಗೇ ಎದ್ದಿದ್ದವು.
ಹಾಗೆ ನೋಡಿದರೆ, ಅಮೆರಿಕಕ್ಕೆ ತೆರಳುವ ಶಾಸಕರ ಮೊದಲ ಪಟ್ಟಿಯಲ್ಲಿಯೂ ಶೋಭಾ ಕರಂದ್ಲಾಜೆ ಅವರ ಹೆಸರು ಇರಲಿಲ್ಲ. ಆದರೆ, ಮುಖ್ಯಮಂತ್ರಿಗಳ ಆಪ್ತರು ಎಂಬ ಕಾರಣಕ್ಕಾಗಿ ಶೋಭಾ ಸೇರಿದಂತೆ ಇನ್ನೂ ಕೆಲವರ ಹೆಸರನ್ನು ನಂತರ ಸೇರಿಸಲಾಗಿತ್ತು. ದಸರಾ ಹಬ್ಬವೂ ಹೊಸ್ತಿಲಲ್ಲೇ ಇರುವುದರಿಂದ ಅದರ ಆಚರಣೆಗೆ ಸಿದ್ಧತೆ ಮಾಡಬೇಕಾಗಿರುವ ಕಾರಣ ನೀಡಿ ಶೋಭಾ ಶಿಕಾಗೋ ಪ್ರವಾಸದಿಂದ ಹಿಂದೆ ಸರಿದಿದ್ದಾರೆ.
ಹೈಕೋರ್ಟ್ನಿಂದ ನೋಟೀಸ್ : ಶಾಸಕರ ನಿಯೋಗ ಅಮೆರಿಕಕ್ಕೆ ಹೋಗುವುದನ್ನು ತಡೆಯಬೇಕೆಂದು ಆಗ್ರಹಿಸಿ ವಾಸುದೇವ್ ಎಂಬ ವಕೀಲರು ಉಚ್ಚ ನ್ಯಾಯಾಲಯದಲ್ಲಿ ಹೂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡಿರುವ ವಿಭಾಗೀಯ ಪೀಠ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದೆ.
ಶಾಸಕರ ಪ್ರವಾಸಕ್ಕೆ ಸರ್ಕಾರಿ ಹಣ ದುರುಪಯೋಗ ಆಗುತ್ತಿದೆ ಎಂದು ಎಲ್ಲೆಡೆಯಿಂದ ದೂರು ಬಂದಿದ್ದವು. ಆದರೆ, ಅದನ್ನು ನಿರಾಕರಣೆ ಮಾಡಿದ್ದ ಯಡಿಯೂರಪ್ಪ ಶಾಸಕರು ತಮ್ಮ ಖರ್ಚಿನಲ್ಲೇ ಅಮೆರಿಕ ಪ್ರವಾಸ ಮಾಡುತ್ತಿದ್ದಾರೆ ಎಂಬು ಸಮಜಾಯಿಷಿ ನೀಡಿದ್ದರು. ಇದರ ಬಗ್ಗೆ ವಿವರ ನೀಡಬೇಕೆಂದು ಹೈಕೋರ್ಟ್ ಯಡಿಯೂರಪ್ಪನವರನ್ನು ಆಗ್ರಹಿಸಿದೆ.
ಈ ನಡುವೆ, ಕೇಂದ್ರ ಕೂಡ ಕರ್ನಾಟಕ ಶಾಸಕರ ಅಮೆರಿಕ ಪ್ರವಾಸಕ್ಕೆ ಅನುಮತಿ ನೀಡಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಅನುಮತಿ ಪತ್ರ ರವಾನೆ ಮಾಡಿದೆ. ಈ ಕಾರಣದಿಂದಾಗಿ ಯಡಿಯೂರಪ್ಪ ಅಮೆರಿಕ ಪ್ರವಾಸವನ್ನು ಮುಂದುವರಿಸುವುದು ಖಚಿತವಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ
ಓದಿಗೆ
ಶಾಸಕರ
ಅಮೆರಿಕ
ಪ್ರವಾಸ
ಪ್ರಶ್ನಿಸಿ
ರಿಟ್
ಅರ್ಜಿ
ಯಡಿಯೂರಪ್ಪ
ಅಮೆರಿಕ
ಪ್ರವಾಸ
ಖಚಿತ
ಯಡಿಯೂರಪ್ಪ
ಅಮೆರಿಕಾ
ಪ್ರವಾಸ
ದಿನಚರಿ