ಸಿಂಗೂರಿನ ಕಾರು ಘಟಕ ಮುಚ್ಚುವ ಚಿಂತನೆ:ಟಾಟಾ
ಕೊಲ್ಕತ್ತಾ, ಆ. 22 : ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಸೇರಿದಂತೆ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಟಾಟಾ ಕಂಪನಿ ಮುಖ್ಯಸ್ಥ ರತನ್ ಟಾಟಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಂಗೂರಿನಲ್ಲಿ ಸ್ಥಾಪಿಸಲಾಗಿರುವ ಟಾಟಾ ಮೋಟಾರ್ಸ್ ವಿರೋಧಿಸಿ ನಡೆಸಲಾಗುತ್ತಿರುವ ಪ್ರತಿಭಟನೆ ಮುಂದುವರೆದಲ್ಲಿ ಕೈಗಾರಿಕೆ ಸ್ಥಗಿತಗೊಳಿಸಿ ಹೊರನಡೆಯುವ ಚಿಂತನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಟಾಟಾ ಮೋಟಾರ್ಸ್ ಕಂಪನಿಯ ವಾರ್ಷಿಕ ಸಭೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಬಂದೋಬಸ್ತ್ ನಲ್ಲಿ ಕೈಗಾರಿಕೆಯನ್ನು ನಡೆಸಲು ಅಸಾಧ್ಯ ಎಂದಿದ್ದಾರೆ. ಕೈಗಾರಿಕೆಯನ್ನು ಸಿಂಗೂರಿನಲ್ಲಿಯೇ ನಡೆಸಬೇಕು ಎನ್ನುವ ಹಠವಿಲ್ಲ. ನಮಗೆ ನಮ್ಮ ಕೈಗಾರಿಕೆಯಲ್ಲಿ ಕೆಲಸ ನಿರ್ವಹಿಸುವ ಉದ್ಯೋಗಿಗಳು ಸುರಕ್ಷಿತವಾಗಿರಬೇಕು. ಕಳೆದ ಒಂದು ವರ್ಷದಿಂದ ಕೈಗಾರಿಕೆಯನ್ನು ವಿರೋಧಿಸಿ ಕೆಲ ಸಂಘಟನೆಗಳು, ರಾಜಕೀಯ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ಇದರಿಂದ ಭಾರಿ ಹಿಂಸಾಚಾರವೂ ನಡೆದಿದೆ. ಇದೆಲ್ಲವೂ ಯಾವ ಪುರುಷಾರ್ಥಕ್ಕೆ ಅನ್ನುವುದು ನನಗೆ ತಿಳಿಯುತ್ತಿಲ್ಲ. ಪ್ರತಿಭಟನೆಯ ಎದುರಿಸುವುದರ ಜತೆಗೆ ಭಯದ ನೆರಳಲ್ಲಿ ಕೈಗಾರಿಕೆಯನ್ನು ನಡೆಸುವುದು ನಮಗೆ ಇಷ್ಟವಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಸಿಂಗೂರಿನ ಕೈಗಾರಿಕೆಯನ್ನು ಮುಚ್ಚಲಾಗುವುದು ಎಂದು ರತನ್ ಟಾಟಾ ಸ್ಪಷ್ಟಪಡಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಸಿಂಗೂರಿನ ಟಾಟಾ ಮೋಟಾರ್ಸ್ ಕಂಪನಿಯ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಭಟ್ಟಾಚಾರ್ಯ ಹಾಗೂ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ನಡೆಸಿದ ಮಾತುಕತೆ ವಿಫಲವಾಗಿದೆ. ಆ. 24 ರಿಂದ ಮಮತಾ ಟಾಟಾ ಮೋಟಾರ್ಸ್ ಎದುರು ಅನಿರ್ಧಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ರೈತರಿಗೆ ಸಂಬಂಧಿಸಿ 400 ಎಕರೆ ಭೂಮಿಯನ್ನು ಟಾಟಾ ಮೋಟಾರ್ಸ್ ಕಂಪನಿಯು ವಶಪಡಿಸಿಕೊಂಡಿರುವುದು ಪ್ರತಿಭಟನೆ ಕಾರಣವಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications