ಬೆಳ್ಳುಬ್ಬಿಗೆ ಕೊಕ್ : ಬಸವನ ಬಾಗೇವಾಡಿಯಲ್ಲಿ ಪ್ರತಿಭಟನೆ
ಬಸವನ ಬಾಗೇವಾಡಿ, ಆ. 22 : ತೋಟಗಾರಿಕೆ ಸಚಿವ ಎಸ್.ಕೆ.ಬೆಳ್ಳುಬ್ಬಿ ತಲೆದಂಡಕ್ಕೆ ಸಿದ್ದವಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕ್ರಮವನ್ನು ವಿರೋಧಿಸಿ ಬಸವನ ಬಾಗೇವಾಡಿಯಲ್ಲಿ ಪ್ರತಿಭಟನೆ ಆರಂಭವಾಗಿದೆ. ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಕಾರ್ಯಕರ್ತರು ಟೈರ್ ಬೆಂಕಿ ಹಚ್ಚಿ ಯಡಿಯೂರಪ್ಪ ಅವರ ವಿರುದ್ಧ ಘೋಷಣೆ ಕೂಗಿದ್ದಾರೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ಜರುಗಿದ ಬಗ್ಗೆ ವರದಿಯಾಗಿಲ್ಲ.
ಸಚಿವ ಬೆಳ್ಳುಬ್ಬಿ ಮಂತ್ರಿಗಿರಿ ಉಳಿಸಲು ಬಿಜಾಪೂರದಲ್ಲಿ ಗುರುವಾರ ಹಿಂಸಾಚಾರ ನಡೆದಿತ್ತು. ಬಸ್ಸಿಗೆ ಕಲ್ಲು ತೂರಾಟ ಹಾಗೂ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಇದರಿಂದ 11 ಜನರು ಗಾಯಗೊಂಡಿದ್ದರು. ಬೆಳ್ಳುಬ್ಬಿ ಅವರ ಸ್ವಗ್ರಾಮ ಕೋಲ್ಹಾರದಲ್ಲಿ ಇಂದು ಕೂಡಾ ಪ್ರತಿಭಟನೆ ಮುಂದುವರೆದಿದೆ. ಪರಸ್ಥಿತಿ ಕೈಮೀರುವ ಲಕ್ಷಣಗಳ ಕಂಡು ಬಂದಿದ್ದರಿಂದ ಬಿಜಾಪೂರ, ಬಸವನ ಬಾಗೇವಾಡಿಯಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದ್ದು, ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸ್ ತುಕಡಿಯನ್ನು ಕರೆಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಜೆಪಿ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದ ನಂತರ 'ಆಪರೇಶನ್ ಕಮಲ 'ಎಂಬ ಹೆಸರಿನಡಿಯಲ್ಲಿ ಅನ್ಯ ಪಕ್ಷಗಳ ಶಾಸಕರನ್ನು ಸೆಳೆಯುವ ಕೆಲಸದಲ್ಲಿ ನಿರತವಾಗಿರುವ ಆಡಳಿತ ಪಕ್ಷ, ಕಾಂಗ್ರೆಸ್ ಮತ್ತು ಜೆಡಿಎಸ್ ಅನೇಕ ಶಾಸಕರನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಬೇರೆ ಪಕ್ಷಗಳಿಂದ ವಲಸೆ ಬರುವ ಶಾಸಕರಿಗೆ ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸಿಕೊಡಲಾಗುವುದು ಎಂದು ಹೇಳಿಕೆ ನೀಡಿರುವ ಯಡಿಯೂರಪ್ಪ, ತಮ್ಮ ಮಂತ್ರಿ ಮಂಡಲದ ಕೆಲ ಸಚಿವರಿಗೆ ಕೊಕ್ ನೀಡಿ ಪಕ್ಷಾಂತರಿಗಳಿಗೆ ಮಣಿ ಹಾಕತೊಗಿದ್ದಾರೆ. ಪುನರ್ ವಸತಿ ಖಚಿತಪಡಿಸಿಕೊಂಡು ಅನ್ಯ ಪಕ್ಷಗಳ ಶಾಸಕರು ಒಬ್ಬೊರಂತೆ ಕಮಲದ ತೆಕ್ಕೆಗೆ ಬೀಳತೊಡಗಿದ್ದಾರೆ. ನಿಗಮ ಮಂಡಳಿಯಲ್ಲಿ ಪಕ್ಷಾಂತರಿಗಳು ಸ್ಥಾನವನ್ನು ಪಡೆಯತೊಡಗಿದ್ದಾರೆ. ಬೆಳ್ಳುಬ್ಬಿ ಸೇರಿ ಕೃಷ್ಣಯ್ಯ ಶೆಟ್ಟಿ, ಮುರುಗೇಶ್ ನಿರಾಣಿ, ರಾಮಚಂದ್ರಗೌಡ ಅವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಹೆಚ್ಚಾಗಿವೆ.
(ದಟ್ಸ್ ಕನ್ನಡ ವಾರ್ತೆ)
ಬೆಳ್ಳುಬ್ಬಿ ಬೆಂಬಲಿಗರಿಂದ ಬಿಜಾಪುರದಲ್ಲಿ ಭಾರೀ ಪ್ರತಿಭಟನೆ