ಮುಂಬೈನಲ್ಲಿ ದಾವೂದ್ ಬಂಟ ಕರೀಮುಲ್ಲಾ ಬಂಧನ
ಮುಂಬೈ,ಆ.22: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತವನ ಕಿರಿಯ ಸಹೋದರ ಅನೀಸ್ ಇಬ್ರಾಹಿಂ ಇಬ್ಬರೂ ಪಾಕಿಸ್ತಾನದ ಕರಾಚಿಯಲ್ಲೇ ತಲೆಮರೆಸಿಕೊಂಡಿದ್ದಾರೆ ಎಂದು ಸಿಬಿಐ ಪೊಲೀಸರಿಗೆ ಸೆರೆಸಿಕ್ಕಿರುವ ದಾವೂದ್ನ ಬಂಟ ಕರೀಮುಲ್ಲಾ ಖಾನ್ ಬಾಯ್ಬಿಟ್ಟಿದ್ದಾನೆ.
1993ರ ಮುಂಬೈ ಸರಣಿ ಸ್ಫೋಟದ ರೂವಾರಿಗಳಲ್ಲಿ ಒಬ್ಬನಾದ ಕರೀಮುಲ್ಲಾ ಖಾನ್(46)ನನ್ನು ಸಿಬಿಐ ಪೊಲೀಸರು ಗುರುವಾರ ಮುಂಬೈನಲ್ಲಿ ಬಂಧಿಸಿದ್ದಾರೆ. 1995ರಲ್ಲಿ ಇವನ ಬಂಧನಕ್ಕೆ ರೆಡ್ ಕಾರ್ನರ್ ನೋಟೀಸನ್ನು ಇಂಟರ್ಪೋಲ್ ಜಾರಿ ಮಾಡಿತ್ತು. ಖಾನ್ ಬಗ್ಗೆ ಸುಳಿವು ಕೊಟ್ಟವರಿಗೆ 5 ಲಕ್ಷ ರು. ಬಹುಮಾನ ಕೊಡುವುದಾಗಿ ಸಿಬಿಐ ಸಹ ಪ್ರಕಟಿಸಿತ್ತು.
ಮುಂಬೈನ ಥಾಣೆ ಪ್ರದೇಶದ ನಲಸೋಪರ ಎಂಬಲ್ಲಿ ಈತ ಒಸಾನ್ ಖಾನ್ ಎಂದು ಹೆಸರು ಬದಲಾಯಿಸಿಕೊಂಡು ಕಳೆದ ಎರಡು ವರ್ಷಗಳಿಂದ ಅಲ್ಲೇ ವಾಸಿಸುತ್ತಿದ್ದ. ಪೊಲೀಸರಿಗೆ ಈತನ ಬಗ್ಗೆ ಸುಳಿವು ದೊರೆತು ಬಂಧಿಸಿದರು. ಶುಕ್ರವಾರ ಕರೀಮುಲ್ಲಾ ಖಾನ್ನನ್ನು ಸಿಬಿಐಗೆ ಒಪ್ಪಿಸುತ್ತಿರುವುದಾಗಿ ಮುಂಬೈ ಅಪರಾಧಿ ವಿಭಾಗದ ಪೊಲೀಸರು ತಿಳಿಸಿದ್ದಾರೆ.
ಭಾರತಕ್ಕೆ ಬರುವುದಕ್ಕೂ ಮುನ್ನ ಕರೀಮುಲ್ಲಾನನ್ನು 2006ರಲ್ಲಿ ದಾವೂದ್ ಕೆಲಸದ ನಿಮಿತ್ತ ಕಟ್ಮಂಡುಗೆ ಕಳುಹಿಸಿದ್ದ.ನಂತರ ಖಾನ್ ನೇಪಾಳವನ್ನು ಬಳಸಿ ಉತ್ತರ ಪ್ರದೇಶದ ಗಡಿಯ ಮೂಲಕ ಭಾರತ ಪ್ರವೇಶಿಸಿದ. ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಈತನ ಕೈವಾಡ ಇತ್ತು. ನಂತರ ತಲೆಮರೆಸಿಕೊಂಡ ಈತ ಪೊಲೀಸರ ಕಣ್ಣಿಗೆ ಬೀಳಲೇ ಇಲ್ಲ. ಮುಂಬೈನಲ್ಲೇ ಇರುವ ಬಗ್ಗೆ ಸುಳಿವು ಸಿಕ್ಕ ಪೊಲೀಸರು ಎರಡು ದಿನಗಳ ಹಿಂದೆಯೇ ಈತನನ್ನು ಬಂಧಿಸಿರುವುದಾಗಿ ಮುಂಬೈ ಸಹಾಯಕ ಕಮೀಷನರ್ ಮಾರಿಯಾ ಹೇಳಿದರು.
ಪಾತಕ ಲೋಕದಲ್ಲಿ ಈತನನ್ನು ಕರೀಂ ಭಾಯ್ ಎಂದು ಕರೆಯುತ್ತ್ತಾರೆ. ದಾವೂದ್ ಇಬ್ರಾಹಿಂ ಸೇರಿದಂತೆ ಅನೀಸ್ ಇಬ್ರಾಹಿಂ ಮತ್ತು ಚೋಟಾ ಷಕೀಲ್ ಸಹ ಪಾಕಿಸ್ಥಾನದಲ್ಲಿರುವುದಾಗಿ ತಿಳಿಸಿದ್ದಾನೆ. ಈತ ಉರ್ದು,ಹಿಂದಿ,ಮರಾಠಿ,ಇಂಗ್ಲಿಷ್,ಅರೇಬಿಕ್ ಮತ್ತ್ತು ನೇಪಾಳಿ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಾನೆ. ಮತ್ತೊಬ್ಬ ಭೂಗತ ಪಾತಕಿ ಟೈಗರ್ ಮೆಮೂನ್ನ ಆಪ್ತನಾಗಿದ್ದ ಎಂದು ಜಂಟಿ ಕಮೀಷನರ್ ವಿವರ ನೀಡಿದರು.
(ಏಜೆನ್ಸೀಸ್)
ಸೌದಿಯಲ್ಲಿ
ದಾವೂದ್
ಇಬ್ರಾಹಿಂ
ಸೋದರನ
ಬಂಧನ