ರಾಷ್ಟ್ರವ್ಯಾಪಿ ಕಾರ್ಮಿಕರ ಮುಷ್ಕರಕ್ಕೆ ವ್ಯಾಪಕ ಬೆಂಬಲ
ನವದೆಹಲಿ, ಆ. 20 : ಮಿತಿಮೀರಿದ ಹಣದುಬ್ಬರ ವಿರೋಧಿಸಿ ಎಡಪಕ್ಷಗಳು ಸೇರಿದಂತೆ ವಿವಿಧ ಎಂಟು ಸಂಘಟನೆಗಳು ಕರೆ ನೀಡಿರುವ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಮುಷ್ಕರದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗಿದ್ದು, ಕೆಲ ಸರ್ಕಾರಿ ಮತ್ತು ಸರ್ಕಾರೇತರ ಕಚೇರಿಗಳು ಕಾರ್ಯವನ್ನು ಸ್ಥಗಿತಗೊಳಿಸಿ ಮುಷ್ಕರಕ್ಕೆ ಬೆಂಬಲ ಸೂಚಿಸಿವೆ.
ಎಡಪಕ್ಷಗಳ ನೇತೃತ್ವದಲ್ಲಿ ನಡೆಯುತ್ತಿರುವ ಮುಷ್ಕರಕ್ಕೆ ಪಶ್ಚಿಮ ಬಂಗಾಳ, ಕೇರಳ ಮತ್ತು ತ್ರಿಪುರಾ ರಾಜ್ಯಗಳಲ್ಲಿ ಮುಷ್ಕರದ ಬಿಸಿ ಹೆಚ್ಚಾಗಿದೆ. ಮುಷ್ಕರದ ಹಿನ್ನೆಲೆಯಲ್ಲಿ ಆ ರಾಜ್ಯಗಳಲ್ಲಿ ರಸ್ತೆ ಸಂಚಾರ, ರೈಲ್ವೆ, ವಿಮಾ ಕಂಪನಿಗಳು, ವಿಮಾನಯಾನ, ಬ್ಯಾಂಕುಗಳು, ಶಾಲಾ ಕಾಲೇಜುಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ಎಲ್ಲ ಕಚೇರಿಗಳು ತಮ್ಮ ಕಾರ್ಯವನ್ನು ಸ್ಥಗಿತಗೊಳಿಸಿವೆ. ಕೈಗಾರಿಕೆಗಳಿಗೂ ಮುಷ್ಕರದ ಬಿಸಿ ತಾಗಿದ್ದು, ಇಂದು ಮುಖ್ಯವಾಗಿ ಸ್ಟೀಲ್, ಔಷಧಿ ಮತ್ತು ಬಟ್ಟೆ ತಯಾರಿಕಾ ಕಂಪನಿಗಳಿಗೆ ಕಾರ್ಖಾನೆಗಳಿಗೆ ರಜೆ ಘೋಷಿಸಿವೆ. ಅಲ್ಲದೇ ಸಾರ್ವಜನಿಕರು ಮುಷ್ಕರಕ್ಕೆ ಬೆಂಬಲ ಸೂಚಿಸಿ ತಮ್ಮ ಅಂಗಡಿ ಮುಂಗಟ್ಚುಗಳನ್ನು ಮುಚ್ಚಿದ್ದಾರೆ. ಭದ್ರತೆಯ ದೃಷ್ಠಿಯಿಂದ ಮುಂಜಾಗ್ರತಾ ಕ್ರಮವಾಗಿ ವ್ಯಾಪಕ ಬಂದೋಬಸ್ತ್ ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ಸಂಭವಿಸಿರುವ ವರದಿಯಾಗಿಲ್ಲ. ವಿವಿಧ ಬೇಡಿಕೆಗಳನ್ನು ಈಡೇರುವಂತೆ ನಡೆಸುತ್ತಿರುವ ಮುಷ್ಕರದಲ್ಲಿ 22 ಸಾವಿರ ಜನರಿಗೆ ಏರ್ ಪೋರ್ಟ್ ನೌಕರರ ಸಂಘ ಬೆಂಬಲ ಸೂಚಿಸಿದೆ.
ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ), ಸೆಂಟ್ ಫಾರ್ ಇಂಡಸ್ಟ್ರೀಯಲ್ ಟ್ರೇಡ್ ಯೂನಿಯನ್ (ಸಿಐಟಿಯು), ಏರ್ ಪೋರ್ಟ್ ಅಥಾರಿಟಿ ಎಂಪ್ಲಾಯಿಸ್ ಯೂನಿಯನ್(ಎಎಇಯು), ಕೇಂದ್ರ ಸರ್ಕಾರ ರಚಿಸಿರುವ ನೂತನ ಆರ್ಥಿಕ ನೀತಿ ವಿರೋಧಿಸಿ ಹಲವು ಬ್ಯಾಂಕುಗಳು ಮುಷ್ಕರದಲ್ಲಿ ನಿರತವಾಗಿವೆ. ಕೇರಳ, ಪಶ್ಚಿಮ ಬಂಗಾಲದಲ್ಲಿ ವಿಮಾನಯಾನ ಮತ್ತು ರೈಲು ಪ್ರಯಾಣಿಕರಿಗೆ ತೊಂದರೆ ಅನುಭವಿಸುತ್ತಿರುವ ದೃಶ್ಯ ಕಂಡುಬಂದಿತು.
(ದಟ್ಸ್ ಕನ್ನಡ ವಾರ್ತೆ)