ತದಡಿ ಯೋಜನೆಗೆ ತಡೆ ಇಲ್ಲ : ಈಶ್ವರಪ್ಪ ಸ್ಪಷ್ಟನೆ
ನವದೆಹಲಿ, ಆ.6 : ''ತದಡಿ ಯೋಜನೆ ಕೈಬಿಟ್ಟಿಲ್ಲ, ಯೋಜನೆ ವಿರುದ್ಧ ಹೋರಾಡುತ್ತಿರುವ ಮಠಾಧೀಶರು, ಪರಿಸರವಾದಿಗಳ ಜತೆ ಮಾತುಕತೆ ನಡೆಸಿ ಅವರ ಮನವೊಲಿಸಿ ಯೋಜನೆ ಜಾರಿಗೊಳಿಸಲಾಗುವುದು'' ಎಂದು ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದ್ದಾರೆ.
ನವದೆಹಲಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವಿದ್ಯುತ್ ಕ್ಷಾಮ ಇದೆ. ಇದರ ನಿವಾರಣೆಗೆ 2 ಅಲ್ಟ್ರಾ ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಘಟಕಗಳ ಅಗತ್ಯವಿದೆ. ರಾಜ್ಯದ ಹಿತದೃಷ್ಟಿಯಿಂದ ತದಡಿಯಲ್ಲಿ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆ ಅನಿವಾರ್ಯ. ಹೋರಾಟಗಳು ನಡೆಯುತ್ತಿವೆ. ಆದರೆ ಹೋರಾಟಗಾರರು ಮತ್ತು ಮಠಾಧೀಶರೊಂದಿಗೆ ಯಾರೂ ಮಾತುಕತೆ ನಡೆಸಿಲ್ಲ. ಈ ಬಗ್ಗೆ ಅವರೊಂದಿಗೆ ಚರ್ಚಿಸಿ, ಯೋಜನೆಯ ಅಗತ್ಯ ಹಾಗೂ ರಾಜ್ಯದ ಹಿತ ವಿವರಿಸಿ ಮನವೊಲಿಸಲಾಗುವುದು. ನಂತರ ಯೋಜನೆ ಜಾರಿ ಮಾಡಲಾಗುವುದು ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.
ತದಡಿಯಲ್ಲಿ ನೀರಿದೆ. 2000 ಎಕರೆ ಸ್ಥಳವೂ ಇದೆ. ವಿದ್ಯುತ್ ಉತ್ಪಾದನಾ ಕೇಂದ್ರ ಸ್ಥಾಪನೆಗೆ 1350 ಎಕರೆ ಸ್ಥಳಬೇಕು. ಕೇಂದ್ರ ರೂಪಿಸಿರುವ ಯೋಜನೆಯಲ್ಲಿ ಖಾಸಗಿ ಸಂಸ್ಥೆಗಳು ವಿದ್ಯುತ್ ಉತ್ಪಾದನಾ ಕೇಂದ್ರ ಸ್ಥಾಪಿಸುತ್ತವೆ. ಈ ಕೇಂದ್ರಗಳಿಗೆ ವಿದ್ಯುತ್ ಉತ್ಪಾದಿಸಲು ಕಲ್ಲಿದ್ದಲು ಅಗತ್ಯ. ಕರಾವಳಿ ಪ್ರದೇಶದಲ್ಲಿ ಉತ್ಪಾದನಾ ಕೇಂದ್ರಗಳಿದ್ದರೆ. ಅದರಲ್ಲೂ ವಿಶೇಷವಾಗಿ ಬಂದರಿನ ಸಮೀಪವಿದ್ದರೆ ಕಲ್ಲಿದ್ದಲು ಸಾಗಣಿ ವೆಚ್ಚ ಕಡಿಮೆಯಾಗುತ್ತದೆ. ಬಂದರು ಹತ್ತಿರ ಇರುವುದರಿಂದ ಘಟಕ ಸ್ಥಾಪನೆಗೆ ತದಡಿ ಸೂಕ್ತ ಸ್ಥಳ ಎಂದು ಈಶ್ವರಪ್ಪ ಅಭಿಪ್ರಾಯಪಟ್ಟರು.
(ಸ್ನೇಹಸೇತು-ವಿಜಯ ಕರ್ನಾಟಕ)