ಮೇಲ್ಮನೆ ಸಭಾಪತಿಯಾಗಿ ವೀರಣ್ಣ ಮತ್ತಿಕಟ್ಟಿ ಆಯ್ಕೆ
ಬೆಂಗಳೂರು, ಆ. 5 : ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿ ವೀರಣ್ಣ ಮತ್ತಿಕಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸೋಲು ಖಚಿತವಾದ ಎನ್ನುವ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ತಮ್ಮ ನಾಮಪತ್ರವನ್ನು ಇಂದು ಹಿಂದಕ್ಕೆ ಪಡೆದಿದ್ದರಿಂದ ಮತ್ತಿಕಟ್ಟಿ ಅವರು ವಿಧಾನ ಪರಿಷತ್ ನ ಸಭಾಪತಿಯಾಗಿ ಆವಿರೋಧವಾಗಿ ಆಯ್ಕೆಯಾದರು.
ಬಿಜೆಪಿ ಪಕ್ಷದಿಂದ ಶಶೀಲ್ ನಮೋಶಿ ಸೋಮವಾರ ನಾಮಪತ್ರ ಸಲ್ಲಿಸಿದ್ದರು. ಸಭಾಪತಿ ಚುನಾವಣೆಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ಕೈಜೋಡಿಸಿರುವ ಕಾರಣ ವೀರಣ್ಣ ಮತ್ತಿಕಟ್ಟಿ ಅವರು ಸಭಾಪತಿ ಸ್ಥಾನಕ್ಕೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿತ್ತು. ಮತಗಳು ವಿರೋಧಿ ಬಣಕ್ಕೆ ಸೋರಿಹೋಗದಂತೆ ಕೂಡಾ ಎರಡು ಪಕ್ಷಗಳು ಮುಖಂಡರು ತಮ್ಮ ಸದಸ್ಯರಿಗೆ ವಿಪ್ ನೀಡಿದ್ದರು.
ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದು ಖಚಿತವಾದ ಹಿನ್ನೆಲೆಯಲ್ಲಿ ಬಿಜೆಪಿಯು ಸೂಕ್ತ ನಿರ್ಧಾರ ಕೈಗೊಳ್ಳಲು ಮಂಗಳವಾರ ಬೆಳಗ್ಗೆ ವಿಧಾನಪರಿಷತ್ ನ ಸದಸ್ಯರ ಸಭೆಯನ್ನು ಕರೆದಿದ್ದರು. ತಮ್ಮ ಪಕ್ಷದ ಅಭ್ಯರ್ಥಿ ಸೋಲುವುದನ್ನು ತಪ್ಪಿಸಲು ಭಾರಿ ಯತ್ನ ನಡೆಸಿದರು. ಆದರೆ ವಿರೋಧಿ ಪಕ್ಷಗಳು ತಮ್ಮ ಪಕ್ಷದ ಸದಸ್ಯರಿಗೆ ವಿಪ್ ನೀಡಿದ್ದರಿಂದ ಬಿಜೆಪಿ ನಾಯಕರ ಪ್ರಯತ್ನ ಫಲಿಸಿಲಿಲ್ಲ. ಆದ್ದರಿಂದ ಕೊನೆ ಗಳಿಗೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಕಣದಿಂದ ಹಿಂದಕ್ಕೆ ಪಡೆದುಕೊಂಡರು. ಇಂದು ಮಧ್ಯಾಹ್ನ ಚುನಾವಣೆ ನಡೆಯಬೇಕಿತ್ತು..
ಸೋಮವಾರ ವೀರಣ್ಣ ಮತ್ತಿಕಟ್ಟಿ ಸಲ್ಲಿಸಿದ್ದ ನಾಮಪತ್ರಕ್ಕೆ ಎಂ.ವಿ.ರಾಜಶೇಖರನ್ ಸೂಚಕ ಹಾಗೂ ಡಿ.ಎಂ.ಪುಟ್ಟೇಗೌಡ ಅನುಮೋದಕರಾಗಿ ಸಹಿ ಹಾಕಿದ್ದರು. ಅದೇ ರೀತಿ ನಮೋಶಿ ಅವರಿಗೆ ಮನೋಹರ ಮಸ್ಕಿ ಮತ್ತು ಗಣೇಶ್ ಕಾರ್ಣೀಕ್ ಸೂಚಕ ಮತ್ತು ಅನುಮೋದಕರಾಗಿ ಸಹಿ ಹಾಕಿದ್ದರು. ಈ ಮಧ್ಯೆ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕರಾಗಿ ವಿ.ಎಸ್.ಉಗ್ರಪ್ಪ ನೇಮಕವಾಗಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications