ಸರಣಿ ಸ್ಫೋಟ : ಸುಳಿವು ನೀಡಿದವರಿಗೆ ಲಕ್ಷ ರು. ಬಹುಮಾನ
ಬೆಂಗಳೂರು, ಜು.26 : ಜುಲೈ 25ರಂದು ಶುಕ್ರವಾರ ನಗರದ 8 ಸ್ಥಳಗಳಲ್ಲಿ ನಡೆದ 9 ಸ್ಫೋಟಗಳ ಹಿಂದಿರುವ ವ್ಯಕ್ತಿಗಳ ಸುಳಿವು ನೀಡಿದವರಿಗೆ 1 ಲಕ್ಷ ರು. ಬಹುಮಾನ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಕರ್ನಾಟಕದ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಕೇಂದ್ರ ತಂಡ ಕೂಡ ಇಲ್ಲಿಗೆ ಆಗಮಿಸುವ ಸಾಧ್ಯತೆಯಿದೆ.
ಶನಿವಾರ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಈ ಕುಕೃತ್ಯದ ಹಿಂದಿರುವ ಕೈಗಳ ಕುರಿತು ಶನಿವಾರ ಸಾಯಂಕಾಲದೊಳಗಡೆ ಖಚಿತ ಸುಳಿವು ದೊರೆಯುವ ನಿರೀಕ್ಷೆಯಿದೆ. ಕೇಂದ್ರದ ಉನ್ನತ ತಂಡ ಕೂಡ ಯಾವುದೇ ಸಮಯದಲ್ಲಿ ತನಿಖೆಗೆ ಆಗಮಿಸಲಿದೆ ಎಂದರು. ಈ ಘಟನೆಯ ಕುರಿತು ಗೃಹ ಸಚಿವ ವಿ.ಎಸ್.ಆಚಾರ್ಯ ಉನ್ನತ ಅಧಿಕಾರಿಗಳೊಡನೆ ಇಂದು ಮಧ್ಯಾಹ್ನ ಸಭೆ ನಡೆಸಲಿದ್ದಾರೆ.
ರಾಜ್ಯದ ಪೊಲೀಸ್ ಮಹಾನಿರ್ದೇಶಕ ಆರ್. ಶ್ರೀಕುಮಾರ್ ಅವರು ಮಾತನಾಡಿ, ಸ್ಫೋಟಗಳ ಹಿಂದೆ ಕೆಲ ವೃತ್ತಿಪರ ಭಯೋತ್ಪಾದಕರ ಕೈವಾಡವಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಸ್ಫೋಟದಲ್ಲಿ ಜಿಲ್ಯಾಟಿನ್ ಕಡ್ಡಿಯೊಡನೆ ಲೋಹದ ತುಣಿಕುಗಳನ್ನು ಸೇರಿಸಲಾಗಿದೆ ಎಂದರು.
ಶನಿವಾರ ಬೆಳಿಗ್ಗೆ ಕೋರಮಂಗಲದ ಫೋರಂ ಮಾಲ್ ಬಳಿ ಲೈವ್ ಬಾಂಬನ್ನು ಪೊಲೀಸರು ನಿಷ್ಕ್ರಿಯ ಗೊಳಿಸಿದರು. ಬಾಂಬ್ ನಿಷ್ಕ್ರಿಯ ದಳ, ಗುಪ್ತಚರ ದಳ ಮತ್ತು ಕರ್ನಾಟಕ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಶುಕ್ರವಾರ ಮಧ್ಯಾಹ್ನದಿಂದ ಸಾಯಂಕಾಲದವರೆಗೆ ನಗರದ ನಾನಾ ಪ್ರದೇಶಗಳಲ್ಲಿ 9 ಕಡೆ ಕಡಿಮೆ ಇಂಟೆನ್ಸಿಟಿ ಇರುವ ಬಾಂಬ್ ಸ್ಫೋಟಗೊಳಿಸಲಾಗಿದೆ. ಇದರಲ್ಲಿ ಇಬ್ಬರು ಸಾವಿಗೀಡಾಗಿದ್ದು ಸುಮಾರು ಆರು ಜನ ಗಾಯಗೊಂಡಿದ್ದಾರೆ.
(ಯುಎನ್ಐ)