ಅಸ್ನೋಟಿಕರ್ ವಿರುದ್ಧ ಎಚ್ಕೆ ಪಾಟೀಲರ ಸ್ಪರ್ಧೆ
ಬೆಂಗಳೂರು, ಜು. 11 : ಕಾರವಾರ ಮತಕ್ಷೇತ್ರದಲ್ಲಿ ನಡೆಯುವ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲಿರುವ ಆನಂದ ಅಸ್ನೋಟಿಕರ್ ವಿರುದ್ಧ ಮಾಜಿ ಸಚಿವ ಎಚ್.ಕೆ.ಪಾಟೀಲ್ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಉತ್ತರ ಕರ್ನಾಟಕ ಪ್ರಭಾವಿ ನಾಯಕ ಎಚ್ಕೆ ಕಳೆದ ವಿಧಾನಸಭೆ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ಪರಾಭವ ಹೊಂದಿದ್ದರು. ಈ ಹಿನ್ನಲೆಯಲ್ಲಿ ಕಾರವಾರ ಕ್ಷೇತ್ರದಲ್ಲಿ ಸಚಿವ ಅಸ್ನೋಟಿಕರ್ ವಿರುದ್ಧ ಸ್ಪರ್ಧಿಸುವ ಮೂಲಕ ಇನ್ನೊಂದು ಬಾರಿಗೆ ಅದೃಷ್ಟ ಪರೀಕ್ಷೆಗೆ ಸಜ್ಜಾಗುತ್ತಿದ್ದಾರೆ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸುಮಾರು ಸಾವಿರಕ್ಕೂ ಅಧಿಕ ಮತಗಳಿಂದ ಚುನಾಯಿತರಾಗಿದ್ದ ಅನಂದ ಅಸ್ನೋಟಿಕರ್ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷ ಸೇರ್ಪಡೆಗೊಂಡು ಸಚಿವರಾಗಿದ್ದಾರೆ. ಖಾಲಿಯಾಗಿರುವ ಕಾರವಾರ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣೆ ನಡೆಯಬೇಕಿದ್ದು, ಆದ್ದರಿಂದ ಕಾಂಗ್ರೆಸ್ ಪಕ್ಷದಿಂದ ಪ್ರಭಾವಿ ನಾಯಕರನ್ನು ಕಣಕ್ಕಿಳಿಸುವ ಚಿಂತನೆ ಹೈಕಮಾಂಡ್ ವಲಯದಲ್ಲಿ ನಡೆದಿದೆ. ಈ ಸ್ಥಾನಕ್ಕೆ ಮಾಜಿ ಸಚಿವ ಎಚ್.ಕೆ.ಪಾಟೀಲ್ ಸೂಕ್ತ ಎನ್ನುವ ತೀರ್ಮಾನಕ್ಕೆ ಹೈಕಮಾಂಡ್ ಬಂದಿದೆ.
ಉತ್ತರ ಕನ್ನಡ ಮತ್ತು ಕಾರವಾರ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಆನಂದ ಅಸ್ನೋಟಿಕರ್ ಅವರ ಕ್ರಮವನ್ನು ತೀವ್ರ ಖಂಡಿಸಿವೆ. ಇದು ಎಚ್ಕೆ ಸ್ಪರ್ಧಿಸಿದಲ್ಲಿ ಅವರಿಗೆ ವರದಾನವಾಗುವ ಸಾಧ್ಯತೆಯಿದೆ. ಜತೆಗೆ ಗಣಿ ಧಣಿಗಳಾದ ಅನಿಲ್ ಲಾಡ್, ಸಂತೋಷ್ ಲಾಡ್ ಮತ್ತು ಬಿಜೆಪಿ ಗಣಿ ಧಣಿಗಳಿಗೆ ಸೆಡ್ಡು ಹೊಡೆದಿರುವ ಜೆಡಿಎಸ್ ಪಕ್ಷವೂ ಕೂಡಾ ಎಚ್ಕೆ ಪಾಟೀಲ್ ಪರವಾಗಿ ನಿಲ್ಲುವ ಇಂಗಿತವನ್ನು ವ್ಯಕ್ತಪಡಿಸಿವೆ.
ದೇವೇಗೌಡ ಮೆಚ್ಚಿಗೆಯನ್ನು ಪಡೆದುಕೊಂಡಿರುವ ಎಚ್ಕೆ ಪಾಟೀಲ್ ಜೆಡಿಎಸ್ ಹಾಗೂ ಕಾಂಗ್ರೆಸ್ ನ ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎನ್ನುವುದು ರಾಜಕೀಯ ವಲಯದಲ್ಲಿ ಕೇಳಿಬರತೊಡಗಿದೆ.
(ದಟ್ಸ್ ಕನ್ನಡ ವಾರ್ತೆ)