ರಾಷ್ಟ್ರಧ್ವಜಕ್ಕೆ ಅಪಮಾನ: ಆಡ್ವಾಣಿ ವಿರುದ್ಧ ದೂರು
ಭೂಪಾಲ್, ಜು.9: ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಲ್.ಕೆ.ಅಡ್ವಾಣಿ ಅವರ ವಿರುದ್ಧ ಕೇಸು ದಾಖಲಾಗಿದೆ. ಜೂ.30ರಂದು ಆಡ್ವಾಣಿ ಅವರ ''My Country My Life'' ಪುಸ್ತಕದ ಹಿಂದಿ ಆವೃತ್ತಿ ಬಿಡುಗಡೆ ಸಮಾರಂಭದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಲಾಗಿದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದ್ದಾರೆ.
ಸಹೀದುಲ್ಲಾ ರೆಹಮಾನ್ ಎಂಬವರು ರಾಜ್ಕುಮಾರ್ ಪಾಂಡೆ ಎಂಬ ವಕೀಲರ ಮೂಲಕ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ದೂರು ಸಲ್ಲಿಸಿದ್ದಾರೆ. ನಮ್ಮ ಸಂವಿಧಾನವು ರಾಷ್ಟ್ರಧ್ವಜವನ್ನು ಲಾಭದ ಉದ್ದೇಶಕ್ಕಾಗಿ ಬಳಸಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ರಾಷ್ಟ್ರಧ್ವಜದ ಮೇಲೆ ಏನನ್ನೂ ಮುದ್ರಿಸುವಂತಿಲ್ಲ. ಗಣ್ಯ ಅತಿಥಿಗಳ ಮುಂದಿನ ಮೇಜು, ಕುರ್ಚಿಗಳನ್ನು ಅಲಂಕರಿಸಲು ಉಪಯೋಗಿಸುವಂತಿಲ್ಲ. ಹಾಗೆಯೇ ನೆಲದ ಮೇಲೂ ಹರಡುವಂತಿಲ್ಲ ಎಂದು ಮುಖ್ಯ ದಂಡಾಧಿಕಾರಿ ಅಜಯ್ ಶ್ರೀವತ್ಸ ಅವರಿಗೆ ಸಲ್ಲಿಸಿರುವ ದೂರಿನಲ್ಲಿ ಹೇಳಿದ್ದಾರೆ.
ಆಡ್ವಾಣಿ ಅವರ ಪುಸ್ತಕದ ರಕ್ಷಾಪುಟದ ಹಿನ್ನಲೆಯಲ್ಲಿ ತ್ರಿವರ್ಣ ಧ್ವಜವನ್ನು ಮುದ್ರಿಸಲಾದೆ. ಜು.30ರಂದು ಪುಸ್ತಕ ಬಿಡುಗಡೆ ಪ್ರಚಾರಕ್ಕಾಗಿ ದೊಡ್ಡ ಜಾಹೀರಾತು ಫಲಕಗಳಲ್ಲಿ ರಾಷ್ಟ್ರಧ್ವಜವನ್ನು ಹೊಂದಿರುವ ಮುಖಪುಟವನ್ನು ಮುದ್ರಿಸಲಾಗಿತ್ತು. ಪುಸ್ತಕ ಬಿಡುಗಡೆ ಸಮಾರಂಭವು ಜು.30ರಂದು ಆಡ್ವಾಣಿ ಅವರ ಎದುರಿನಲ್ಲೇ ನಡೆಯಿತು ಎಂದು ಅರ್ಜಿಯಲ್ಲಿ ದೂರಿದ್ದಾರೆ.
(ದಟ್ಸ್ಕನ್ನಡ ವಾರ್ತೆ)