ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತ ಹತ್ಯೆ
ಬೆಂಗಳೂರು, ಜೂ. 28 : ಬೈಕಿನಲ್ಲಿ ಬಂದ ಐವರು ದುಷ್ಕರ್ಮಿಗಳ ಗುಂಪೊಂದು ಶುಕ್ರವಾರ ಮಧ್ಯರಾತ್ರಿ ಕಾಂಗ್ರೆಸ್ ಕಾರ್ಯಕರ್ತ ಚಂದ್ರಶೇಖರ್ ಅವರನ್ನು ಹತ್ಯೆಗೈದು ಪರಾರಿಯಾಗಿರುವ ಭೀಕರ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.
ಗುರುವಾರ ರಾತ್ರಿ ಮನೆಯಲ್ಲಿ ಊಟ ಮುಗಿಸಿ ಕುಳಿತಿದ್ದ ಚಂದ್ರಶೇಖರ್ ಅವರನ್ನು ಮಧ್ಯರಾತ್ರಿ ಸುಮಾರು 11.40 ಗಂಟೆಗೆ ಹೊರಗಿನಿಂದ ಅಣ್ಣ ಎಂದು ಕರೆದ ಶಬ್ದ ಕೇಳಿ ಬಂದಿದೆ. ಹೊರಬಂದ ಚಂದ್ರಶೇಖರ್ ಅವರ ಮೇಲೆ ಐದು ಜನರ ಗುಂಪೊಂದು ಏಕಾಏಕಿ ಮಾರಕಾಸ್ತ್ರಗಳಿಂದ ಮನ ಬಂದಂತೆ ದಾಳಿ ನಡೆಸಿದೆ. ಸಿನಿಮೀಯ ರೀತಿಯಲ್ಲಿ ನಡೆದ ಈ ದುರ್ಘಟನೆಯಲ್ಲಿ ಚಂದ್ರಶೇಖರ್ ಅವರ ಪ್ರಾಣಪಕ್ಷಿ ಕ್ಷಣಾರ್ಧದಲ್ಲಿ ಹಾರಿಹೋಗಿದೆ. ಕುಟುಂಬ ಸದಸ್ಯರು ಹೊರ ಬರುವಷ್ಟರಲ್ಲಿ ದುಷ್ಕರ್ಮಿಗಳು ಚಂದ್ರಶೇಖರ್ ಅವರನ್ನು ಹತ್ಯೆಗೈದು ಪರಾರಿಯಾಗಿದ್ದಾರೆ.
ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದ ಚಂದ್ರಶೇಖರ್, ಮುಂದಿನ ಮಹಾನಗರಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದರು. ವೃತ್ತಿಯಿಂದ ಕೇಬಲ್ ವ್ಯವಹಾರ ನಡೆಸುತ್ತಿದ್ದ ಅವರು, ಇತ್ತೀಚೆಗೆ ಈ ಸಂಬಂಧ ಕೆಲ ಗಲಾಟೆಗಳು ನಡೆದು ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲು ಏರಿತ್ತು ಎನ್ನಲಾಗಿದೆ. ಕೇಬಲ್ ಮಾಫಿಯಾ ಚಂದ್ರಶೇಖರ್ ಅವರ ಹತ್ಯೆ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ಕೊಲೆಗೈದು ಪರಾರಿಯಾಗಿರುವ ಐವರು ದುಷ್ಕರ್ಮಿಗಳ ತಂಡದ ಬಂಧನಕ್ಕೆ ಪೊಲೀಸರು ವ್ಯಾಪಕ ಜಾಲ ಬೀಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)