ತೂಗುಯ್ಯಾಲೆಯಲ್ಲಿ ಬೆಳಗಾವಿ ಮೇಯರ್ ಸ್ಥಾನ
ಬೆಳಗಾವಿ, ಜೂ .24 : ಹದಿನೇಳು ವರ್ಷಗಳ ನಂತರ ಕನ್ನಡದವರಿಗೆ ದೊರೆಕಿರುವ ಮೇಯರ್ ಹುದ್ದೆ ಕೈ ತಪ್ಪಿ ಹೋಗುವ ಸಾಧ್ಯತೆಗಳು ಹತ್ತಿರವಾಗ ತೊಡಗಿವೆ.ಪಾಲಿಕೆಯಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳಿಂದಾಗಿ ಕಳೆದ ಕನ್ನಡ ಮೇಯರ್ ಆಗಿ ಆಯ್ಕೆಯಾಗಿರುವ ಪ್ರಶಾಂತಾ ಬುಡವಿ, ಆಯುಕ್ತ ಪಿ.ಎ.ಮೇಘಣ್ಣವರ ನಡುವಿನ ಸಂಘರ್ಷದಿಂದಾಗಿ ಮೇಯರ್ ಸ್ಥಾನ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.
ಮೇಯರ್ ಪ್ರಶಾಂತಾ ಬುಡವಿ ಮತ್ತು ಆಯುಕ್ತ ಮೇಘಣ್ಣವರ ನಡುವಿನ ವಿರಸ ತಾರಕಕ್ಕೇರಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮೇಯರ್ ಪ್ರಶಾಂತಾ ಬುಡವಿ, ಆಯುಕ್ತ ಮೇಘಣ್ಣವರ ತಮಗೆ ಗೌರವ ನೀಡುತ್ತಿಲ್ಲ. ಹೀಗಾಗಿ ಅವರನ್ನು ವರ್ಗಾಯಿಸುವವರೆಗೆ ಪಾಲಿಕೆ ಸಭೆಯನ್ನು ನಡೆಸಲು ಬಿಡುವುದಿಲ್ಲ ಎಂದು ಶನಿವಾರ ಹೇಳಿಕೆ ನೀಡಿದ್ದರಿಂದ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ.
ಮೇಯರ್ ಅವರ ಈ ಹೇಳಿಕೆ ಭಾರಿ ವಿವಾದವನ್ನೇ ಸೃಷ್ಟಿಸಿದೆ. ಮೇಯರ್ ಹೇಳಿಕೆಯನ್ನು ಖಂಡಿಸಿ ಪಾಲಿಕೆ ನೌಕರರು ಸೋಮವಾರದಿಂದ ಅನಿರ್ಧಿಷ್ಠಾವದಿವರೆಗೆ ಸಾಮೂಹಿಕ ರಜೆ ಘೋಷಿಸಿದ್ದಾರೆ. ಪಾಲಿಕೆಯ 52 ಸದಸ್ಯರೂ ಮೇಯರ್ ವಿರೋಧಿಗಳಾಗಿದ್ದಾರೆ.ಈ ಮೂಲಕ ಮೇಯರ್ ಗುಂಪಿನ ಶಕ್ತಿ ಕುಗ್ಗಿದ್ದು, ಈ ವಿವಾದದಿಂದಾಗಿ ಮೇಯರ್ ಪ್ರಶಾಂತಾ ಬುಡವಿ ಮೇಯರ್ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಗಳಿವೆ ಎನ್ನುವ ಮಾತು ವ್ಯಾಪಕವಾಗಿ ಕೇಳಿಬರತೊಡಗಿದೆ.
ಪಾಲಿಕೆ ಆಯುಕ್ತ ಮೇಘಣ್ಣವರ ಉತ್ತಮ ಕೆಲಸ ಮಾಡಿದ್ದಾರೆ. ಆದರೆ ಅವರ ವಿರುದ್ಧ ಏಕಪಕ್ಷೀಯವಾಗಿ ನಿರ್ಣಯ ಕೈಗೊಂಡಿರುವ ಪ್ರಶಾಂತಾ ಬುಡವಿ ಮೇಯರ್ ಸ್ಥಾನ ಕೂಡಲೇ ರಾಜೀನಾಮೆ ನೀಡಬೇಕು ಎಂದು ಪಾಲಿಕೆ ನೌಕರರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.ಈ ನಿರ್ಧಾರದಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ಸೋಮವಾರ ಪಾಲಿಕೆ ನೌಕರರು ಪ್ರತಿಭಟನಾ ಮೆರವಣಿಗೆ ನಡೆಸಿದ್ದರು.
ಸಾರ್ವಜನಿಕರಿಗೆ ತೊಂದರೆಯಾಗದಂತೆ ನೌಕರರು ವರ್ತಿಸಬಾರದು. ಪ್ರತಿಭಟನೆಯನ್ನು ಹಿಂಪಡೆಯುವಂತೆ ಆಯುಕ್ತ ಮೇಘಣ್ಣವರ ಮಾಡಿಕೊಂಡ ಮನವಿಯನ್ನು ನೌಕರರು ತಿರಸ್ಕರಿಸಿದ್ದಾರೆ.
(ದಟ್ಸ್ಕನ್ನಡ ವಾರ್ತೆ)