ನಗರದಲ್ಲಿ ದ್ವೇಷದ ಹಿನ್ನಲೆ ಜೋಡಿ ಕೊಲೆ
ಬೆಂಗಳೂರು, ಜೂ.24 : ದ್ವೇಷದ ಹಿನ್ನಲೆಯಲ್ಲಿ ನಗರದ ಕುಮಾರಸ್ವಾಮಿ ಲೇಔಟ್ ನ ಇಲಿಯಾಸ್ ನಗರದಲ್ಲಿ ದುಷ್ಕರ್ಮಿಗಳು ಜೋಡಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕೇಬಲ್ ರಿಜ್ವಾನ್ ಮತ್ತು ಮೆಹಬೂಬು ಅಲಿಯಾಸ್ ಬಾಬು ಕೊಲೆಯಾದವರು.
ಜೋಡಿ ಕೊಲೆ ನಂತರ ಇಲಿಯಾಸ್ ನಗರದ ಸುತ್ತಮುತ್ತ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸುದ್ದಿ ತಿಳಿದ ತಕ್ಷಣ ಪೊಲೀಸರು ಬಿಗಿ ಬಂದೋಬಸ್ತ್ ನಿಯೋಜಿಸಿ, ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.ರಿಜ್ವಾನ್ ಸಹೋದರ ಪೈಸಲ್ ನನ್ನು ಕೆಲ ವರ್ಷಗಳ ಹಿಂದೆ ಕೊಲೆ ಮಾಡಿದ್ದರು. ಈ ಪ್ರಕರಣದಲ್ಲಿ ರಿಜ್ವಾನ್ ಸಾಕ್ಷಿ ಹೇಳಿದ್ದ. ಇದರಿಂದ ಕೋಪಗೊಂಡಿದ್ದ ದುಷ್ಕರ್ಮಿಗಳು ರಿಜ್ವಾನ್ ಕೊಲೆಗೆ ಹೊಂಚು ಹಾಕಿದ್ದರು.
ಸೋಮವಾರ ರಾತ್ರಿ ಸುಮಾರು ಒಂಬತ್ತು ಗಂಟೆಗೆ ರಿಜ್ವಾನ್ ಸ್ನೇಹಿತ ಮೆಹಬೂಬ್ ನೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ದುರ್ಷರ್ಮಿಗಳು ಕಾರಿನ ಮೇಲೆ ಕಲ್ಲು ಎತ್ತಿ ಹಾಕಿದ್ದಾರೆ. ಕಾರು ನಿಲ್ಲಿಸಿ ಓಡುತ್ತಿದ್ದ ರಿಜ್ವಾನ್ ಮತ್ತು ಮೆಹಬೂಬ್ ನನ್ನು ಬೆನ್ನಟ್ಟಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಇಬ್ಬರ ಮೇಲೂ ಮನ ಬಂದಂತೆ ದಾಳಿ ನಡೆಸಿದರು. ತೀವ್ರವಾಗಿ ಗಾಯಗೊಂಡಿದ್ದ ರಿಜ್ವಾನ್ ಮತ್ತು ಮೆಹಬೂಬ್ ಸ್ಥಳದಲ್ಲೇ ಸಾವನ್ನಪ್ಪಿದರು.
ಮಸೀದಿ ವಿಷಯಕ್ಕೆ ಸಂಬಂಧಿಸಿದಂತೆ ರಿಜ್ವಾನ್ ಮತ್ತು ಕೆಲವರ ಮಧ್ಯೆ ದ್ವೇಷ ಬೆಳೆದಿತ್ತು. ಸಂಜೆ ಸಹ ಈ ವಿಷಯಕ್ಕೆ ಸಂಬಂಧಿಸಿದಂತೆ ರಿಜ್ವಾನ್ ಮತ್ತು ಇನ್ನೊಂದು ಗುಂಪಿನ ಮಧ್ಯೆ ತೀವ್ರ ವಾಗ್ವಾದ ನಡೆದಿತ್ತು. ಇದೇ ಕಾರಣಕ್ಕೆ ಈ ಕೊಲೆ ನಡೆದಿದೆ ಎನ್ನಲಾಗಿದೆ. ರಿಜ್ವಾನ್ ರೌಡಿ ಪಟ್ಟಿಯಲ್ಲಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)