ಉಚ್ಛಾಟಿತರನ್ನು ಪಕ್ಷಕ್ಕೆ ಕರೆತರಲು ಕಾಂಗ್ರೆಸ್ ಮಂಥನ
ಬೆಂಗಳೂರು, ಜೂ. 24 : ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಜೆಪಿ ಸರ್ಕಾರದಲ್ಲಿ ಮಂತ್ರಿಗಳಾಗಿರುವ ಮಹಿಳಾ ಮತ್ತು ಮಕ್ಕಳ ಖಾತೆ ಸಚಿವ ನರೇಂದ್ರಸ್ವಾಮಿ, ಚಿಕ್ಕ ನೀರಾವರಿ ಮತ್ತು ರೇಷ್ಮೆ ಖಾತೆ ಸಚಿವ ವೆಂಕಟರಮಣಪ್ಪ,ಸಮಾಜ ಕಲ್ಯಾಣ ಖಾತೆ ಸಚಿವ ಡಿ.ಸುಧಾಕರ್ ಮತ್ತು ಕೋಲಾರ ಶಾಸಕ ವರ್ತೂರು ಪ್ರಕಾಶ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಿರುವ ಆದೇಶವನ್ನು ಕಾಂಗ್ರೆಸ್ ಪಕ್ಷ ವಾಪಸ್ಸು ಪಡೆದುಕೊಳ್ಳಲು ಚಿಂತನೆ ನಡೆಸಿದೆ.
ಈ ಕುರಿತು ಇನ್ನೆರಡು ದಿನಗಳಲ್ಲಿ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆಗಳಿವೆ. ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎನ್ನುವಂತಾಗಿದೆ ಕಾಂಗ್ರೆಸ್ ಹೈಕಮಾಂಡ್ ವರ್ತನೆ. ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಿದ ನಂತರ ಕಾಂಗ್ರೆಸ್ ಪಕ್ಷದ ನಾಯಕರಿಗೆ ಜ್ಞಾನೋದಯವಾದಂತಿದೆ. ಚುನಾವಣೆ ಸಮಯದಲ್ಲಿ ಪಕ್ಷೇತರ ಅಭ್ಯರ್ಥಿಗಳಾಗಿ ಮತ್ತು ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆಂಬ ಆರೋಪದ ಮೇಲೆ ಪಕ್ಷದಿಂದ ಅಮಾನತು ಮಾಡಿದವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲು ಮುಂದಾಗಿದ್ದಾರೆ.
ಇದು ರಾಜಕೀಯ ವಲಯದಲ್ಲಿ ಮಹತ್ವದ ಬೆಳವಣಿಗೆ ಎನ್ನಲಾಗಿದ್ದು, ಮುಂಬರುವ ಲೋಕಸಭೆ ಚುನಾವಣೆಯ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೈಕಮಾಂಡ್ ಮೂಲಗಳಿಂದ ಗೊತ್ತಾಗಿದೆ. ಪಕ್ಷ ಬಲವರ್ಧನೆ ದೃಷ್ಠಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಪಕ್ಷ ವಿರೋಧಿ ಚಟುವಟಿಕೆ ಆಧಾರದ ಮೇಲೆ ಅಮಾನತುಗೊಂಡಿರುವ ಎಲ್ಲರಿಗೂ ಇದೊಂದು ಬಾರಿಗೆ ಮತ್ತೆ ಪಕ್ಷದಲ್ಲಿ ಅವಕಾಶ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. ಬಿಜೆಪಿ ಪಕ್ಷದಲ್ಲಿ ಮೂವರು ಸಚಿವರಾದ ನರೇಂದ್ರಸ್ವಾಮಿ, ಸುಧಾಕರ್, ವೆಂಕಟರಮಣಪ್ಪ ಮತ್ತು ಒಬ್ಬ ಶಾಸಕ ವರ್ತೂರು ಪ್ರಕಾಶ ಹಾಗೂ ಸಿದ್ಧರಾಮಯ್ಯ ಅವರ ಅಪ್ತ ಎನ್ನಲಾದ ಅಪ್ಪಣ್ಣ ಅವರ ಅಮಾನತು ಆದೇಶವನ್ನು ರದ್ದುಪಡಿಸಿ ಮತ್ತೆ ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೀಡಲಾಗಿದೆ ಎಂದು ಖರ್ಗೆ ಹೇಳಿದರು.
ಬಿಜೆಪಿ ಪಕ್ಷದಲ್ಲಿ ಮಹತ್ವದ ಸ್ಥಾನ ವಹಿಸಿರುವ ಪಕ್ಷೇತರರು ಮನಸ್ಸು ಮಾಡಿದರೆ ಮತ್ತೆ ರಾಜಕೀಯ ಅಲ್ಲೂಲಕಲ್ಲೂಲ ಸೃಷ್ಟಯಾಗುವ ಸಾಧ್ಯತೆಗಳನ್ನು ಈ ಬೆಳವಣಿಯ ಮೂಲಕ ತಳ್ಳಿಹಾಕುವಂತಿಲ್ಲ. ಜೆಡಿಎಸ್ ನಾಯಕರು ಸಮ್ಮಿಶ್ರ ಸರ್ಕಾರಕ್ಕೆ ಈಗಾಗಲೇ ಹಸಿರು ನಿಶಾನೆ ತೋರಿಸಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನಿಜವಾಗಲೂ ಇದು ಅಗ್ನಿ ಪರೀಕ್ಷೆಯ ಬೆಳವಣಿಗೆಯೇ ಸರಿ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications