ಕರವೇ ಶಿಬಿರ: ಶೀಶೆಗಳಲ್ಲಿ ಶೇಖರವಾದ ಕನ್ನಡಿಗರ ರಕ್ತ
ಬೆಂಗಳೂರು , ಜೂ 10 : ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣ ಗೌಡರ ಹುಟ್ಟು ಹಬ್ಬದ ಅಂಗವಾಗಿ ಕ.ರ.ವೇ ಬುಧವಾರ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ರಾಜ್ಯವ್ಯಾಪಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಕ.ರ.ವೇ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
"ಕನ್ನಡದ ಉಳಿವಿಗಾಗಿ ರಕ್ತ ಚೆಲ್ಲುತ್ತೇವೆ, ಒಂದು ಜೀವದ ಉಳಿವಿಗಾಗಿ ರಕ್ತ ಕೊಡುತ್ತೇವೆ" ಅನ್ನುವ ಘೋಷ ವಾಕ್ಯದಡಿ ನಡೆದ ಕಾರ್ಯಕ್ರಮಕ್ಕೆ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಗೋಸಾಯಿ ಮಠದ ಶ್ರೀ ಸುರೇಶ್ವರಾನಂದ ಭಾರತಿ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರ ಸ್ವಾಮೀಜಿ, ಪಾಂಡವಪುರ ಬೇಬಿ ಮಠದ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ, ಸಚಿವರಾದ ಆರ್.ಅಶೋಕ್, ಅರವಿಂದ ಲಿಂಬಾವಳಿ, ಶಾಸಕರಾದ ರವಿ ಸುಬ್ರಮಣ್ಯ, ವಿಧಾನ ಪರಿಷತ್ ಸದಸ್ಯ ಮುಖ್ಯಮಂತ್ರಿ ಚಂದ್ರು ಮುಂತಾದವರು ಉಪಸ್ಥಿತರಿದ್ದರು.
ರಾಜ್ಯದ ಎಲ್ಲ ಜಿಲ್ಲಾ ಕೇಂದ್ರದಲ್ಲೂ ಏಕ ಕಾಲಕ್ಕೆ ನಡೆದ ಈ ಕಾರ್ಯಕ್ರಮದಿಂದ ಸಂಗ್ರಹವಾದ ರಕ್ತವನ್ನು ವಿವಿಧ ಸರಕಾರಿ ಆಸ್ಪತ್ರೆಗಳಿಗೆ ನೀಡಿ, ಬಡ ರೋಗಿಗಳಿಗೆ ನೆರವಾಗುವುದರ ಮುಲಕ ಕ.ರ.ವೇ ತನ್ನ ಸಾಮಾಜಿಕ ಕಳಕಳಿಯನ್ನು ಮೆರೆಯಿತು. ಕಾರ್ಯಕ್ರಮದಲ್ಲಿ ಹಲವು ವಿಶೇಷಗಳು ಕಂಡು ಬಂದವು. ಐಡಿಯಲ್ ಹೋಮ್ ಫಾರ್ ಬ್ಲೈಂಡ್ಸ್ ನ ಅಂಧ ಯುವಕ ಯುವತಿಯರು ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದರು. ಅಲ್ಲದೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜೀವ ಉಳಿಸುವ ಈ ಕಾರ್ಯಕ್ರಮಕ್ಕೆ ಅರ್ಥ ತಂದರು.
ಸಸಿ ನೆಡುವಿಕೆ, ಬಡ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ, ಸರಕಾರಿ ಆಸ್ಪತ್ರೆ ದತ್ತು ತೆಗೆದುಕೊಂಡಿದ್ದು, ಗ್ರಾಮೀಣ ಆಸ್ಪತ್ರೆಗೆ ಅಂಬುಲೆನ್ಸ್ ಕೊಡಿಸಿದ್ದು, ಹೀಗೆ, ವಿಭಿನ್ನವಾದ ಸಾಮಾಜಿಕ ಕಾರ್ಯಗಳಲ್ಲಿ ತೋಡಗಿಕೊಂಡಿರುವ ಕ.ರ.ವೇ ಈ ವರ್ಷ ರಕ್ತದಾನ ಶಿಬಿರದ ಮೂಲಕ ತನಗಿರುವ ಸಾಮಾಜಿಕ ಕಳಕಳಿಯನ್ನು ವಿಭಿನ್ನವಾಗಿ ತೋರ್ಪಡಿಸಿತು.
ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಚಿತ್ರಗಳು
( ದಟ್ಸ್ ಕನ್ನಡ ವಾರ್ತೆ)












Click it and Unblock the Notifications