ಯೋಜನಾ ಮಂಡಳಿ ಉಪಾಧ್ಯಕ್ಷರಾಗಿ ಡಿಎಚ್ಎಸ್
ಬೆಂಗಳೂರು, ಜೂ. 9 : ಸಚಿವ ಸಂಪುಟದಲ್ಲಿ ಸ್ಥಾನ ದೊರೆಯದೇ ಅಸಮಾಧಾನರಾಗಿದ್ದ ಬಿಜೆಪಿ ಹಿರಿಯ ನಾಯಕ ಡಿ.ಎಚ್.ಶಂಕರಮೂರ್ತಿ ಅವರಿಗೆ ಯೋಜನಾ ಮಂಡಳಿ ಉಪಾಧ್ಯಕ್ಷ ಸ್ಥಾನ ನೀಡುವ ಮೂಲಕ ಸಮಾಧಾನಗೊಳಿಸುವಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. ಸೋಮವಾರ ಶಂಕರಮೂರ್ತಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಸಚಿವ ಸಂಪುಟದಲ್ಲಿ ಸ್ಥಾನ ದೊರೆಯದಿದ್ದಕ್ಕಾಗಿ ಶಂಕರಮೂರ್ತಿ ತೀವ್ರ ಅಸಮಾಧಾನಗೊಂಡಿದ್ದರು. ಅದನ್ನು ಕೆಲವಡೆ ಬಹಿರಂಗವಾಗಿ ಹೊರಗೆಡವಿದ್ದು ಉಂಟು. ಈ ಕಾರಣಕ್ಕೆ ಶಂಕರಮೂರ್ತಿ ಅಭಿಮಾನಿಗಳು ಶಿವಮೂಗ್ಗದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಎಲ್ಲ ಬೆಳವಣಿಗೆಯ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಶಂಕರಮೂರ್ತಿ ಅವರಿಗೆ ಯೋಜನಾ ಮಂಡಳಿ ಉಪಾಧ್ಯಕ್ಷ ನೇಮಿಸಿದ್ದು, ಶಂಕರಮೂರ್ತಿ ಇಂದು ಪ್ರಮಾಣ ವಹಿಸಿಕೊಳ್ಳುವ ಮೂಲಕ ಪಕ್ಷದಲ್ಲಿ ಎದ್ದಿದ್ದ ಅಸಮಾಧಾನವನ್ನು ನಿರಾತಂಕವಾಗಿ ಶಮನಗೊಳಿಸಲಾಗಿದೆ.
ನರೇಂದ್ರಸ್ವಾಮಿ ಅತೃಪ್ತಿ : ಬಿಜೆಪಿ ಸರ್ಕಾರ ರಚನೆಯಲ್ಲಿ ಪಕ್ಷೇತರ ಸ್ಥಾನ ಅತೀ ಮಹತ್ವದ್ದಾಗಿದೆ. ಆದರೂ ಕೂಡಾ ಖಾತೆ ಹಂಚಿಕೆಯಲ್ಲಿ ಕಡೆಗಣಿಸಲಾಗಿದೆ ಮಳವಳ್ಳಿ ಕ್ಷೇತ್ರದ ಪಕ್ಷೇತರ ಶಾಸಕ ನರೇಂದ್ರಸ್ವಾಮಿ ಅವರು ಬಹಿರಂಗವಾಗಿ ಹೇಳುವ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ನರೇಂದ್ರಸ್ವಾಮಿ ಅವರಿಗೆ ಮಹಿಳಾ ಮತ್ತು ಮಕ್ಕಳ ಖಾತೆ ನೀಡಿದ್ದಾರೆ. ಸರ್ಕಾರ ರಚನೆಗೆ ಸೂತ್ರದಾರರಾಗಿರುವ ನಮಗೆ ರೋಗಗ್ರಸ್ತ ಖಾತೆಗಳನ್ನು ನೀಡಿದ್ದರಿಂದ ಮುನಿಸಿಕೊಂಡಿದ್ದಾರೆ. ಅವರ ಕೋಪ ತಣಿಸಲು ಮುಖ್ಯಮಂತ್ರಿಗಳು ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎಚ್.ಕೆ.ಪಾಟೀಲ್ ನಾಮಪತ್ರ ಸಲ್ಲಿಕೆ : ವಿಧಾನ ಪರಿಷತ್ ಪದವೀಧರರ ಹಾಗೂ ಶಿಕ್ಷಕರ ಚುನಾವಣೆಗೆ ಸೋಮವಾರ ಕೊನೆಯ ದಿನವಾಗಿದ್ದು, ಕಾಂಗ್ರೆಸ್ ಮುಖಂಡ ಎಚ್.ಕೆ.ಪಾಟೀಲ್ ಪಶ್ಚಿಮ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದರು. ಪ್ರಥಮ ಬಾರಿಗೆ ವಿಧಾನಸಭೆ ಸ್ಪರ್ಧಿಸಿ ಸೋಲನುಭವಿಸಿ ಮುಖಭಂಗಕ್ಕಿಡಾಗಿರುವ ಪಾಟೀಲ್ ಅವರಿಗೆ, ಈ ಚುನಾವಣೆ ಪ್ರತಿಷ್ಠೆ ಕಣ ಎನ್ನುವುದರಲ್ಲಿ ಎರಡು ಮಾತಿಲ್ಲ.
(ದಟ್ ಕನ್ನಡ ವಾರ್ತೆ)