'ನರಕ'ದಿಂದ ಮರಳಿದ ನಯೀಮ್ಗೆ ತವರಲ್ಲಿ ಭವ್ಯ ಸ್ವಾಗತ
ಮಂಗಳೂರು, ಮೇ 28 : ಅಪಘಾನಿಸ್ತಾನದಲ್ಲಿ ಅಪಹರಣಕ್ಕೊಳಗಾಗಿ 27 ದಿನಗಳ ಕಾಲ 'ನರಕ' ದರ್ಶನ ಮಾಡಿ ಬಿಡುಗಡೆಯಾಗಿ ಸುರಕ್ಷಿತವಾಗಿ ವಾಪಸ್ ಬಂದಿರುವ ಮಂಗಳೂರಿನ ಮೂಲದ ಎಂಜಿನಿಯರ್ ನಯೀಮ್ ಸಾರಂಗ್ ಬುಧವಾರ ತಮ್ಮ ತವರೂರಾದ ಗುರುಕಂಬಳ ಗ್ರಾಮಕ್ಕೆ ಆಗಮಿಸಿದರು.
ಅವರು ತವರಿಗೆ ಕಾಲಿಡುತ್ತಿದ್ದಂತೆ ಕುಟುಂಬ ಸದಸ್ಯರು ಹರ್ಷೋಲ್ಲಾಸದಿಂದ ನಲಿದರು. ಕೇಕ್ ಕಟ್ ಮಾಡಿ ಸಂಭ್ರಮ ಹಂಚಿಕೊಂಡರು. ಕುಟುಂಬವಷ್ಟೇ ಅಲ್ಲ ಇಡೀ ಗ್ರಾಮದ ಜನತೆ ನಯೀಮ್ಗೆ ಭವ್ಯ ಸ್ವಾಗತ ಕೋರಿದರು. ಗುರುಕುಂಬಳ ಹಳ್ಳಿಯ ಜನತೆಗೆ ಸಿಹಿ ಹಂಚಲಾಯಿತು. ಗ್ರಾಮದಲ್ಲೆಲ್ಲ ಸಂತಸ, ಸಂಭ್ರಮದ ವಾತವರಣ ಮುಗಿಲು ಮುಟ್ಟಿತ್ತು.
ಅಪಘಾನಿಸ್ತಾನದಲ್ಲಿನ ದುಬೈ-ಕೆನಡಾ ಮೂಲದ ರಸ್ತೆ ಕಾಮಗಾರಿ ಕಂಪನಿಯೊಂದರಲ್ಲಿ ಎಲೆಕ್ಟ್ರಿಕಲ್ ಎಂಜನಿಯರ್ ಆಗಿ ಕೆಲಸ ನಿರ್ವಹಿಸುವ ನಯೀಮ್ ಸಾರಂಗ್, ನೇಪಾಳಿ ಸ್ನೇಹಿತನೊಂದಿಗೆ ಮಾರುಕಟ್ಟೆಯಿಂದ ವಾಪಸ್ ಬರುತ್ತಿದ್ದಾಗ ಆಗಂತುಕರ ತಂಡವೊಂದು ಇಬ್ಬರನ್ನು ಕಳೆದ ಏಪ್ರೀಲ್ 21ರಂದು ಅಪಹರಿಸಿತ್ತು. ಅಪಹರಣಕಾರರು ಅವರಿಗೆ ಬರೀ ಕಪ್ಪು ಚಹಾ ಮಾತ್ರ ಕೊಡುತ್ತಿದ್ದರು. ಬದುಕುಳಿಯಲು ಅವರು ಕೆಲಬಾರಿ ಹುಲ್ಲನ್ನೂ ತಿನ್ನುತ್ತಿದ್ದರು.
ಹಲವಾರು ದಿನಗಳು ಕಳೆದರೂ ನಯೀಮ್ರ ಸುಳಿವು ದೊರೆಯದಿದ್ದಾಗ, ಆತನ ಕುಟುಂಬ ಭಾರತ ಮತ್ತು ಅಪಘಾನಿಸ್ತಾನ ಸರ್ಕಾರಕ್ಕೆ ಮನವಿ ಮಾಡಿಕೊಂಡಿತ್ತು. ಕಾಬೂಲ್ ಪೊಲೀಸರ ಪ್ರಯತ್ನದಿಂದಾಗಿ ನಯೀಮ್ ಮೇ 18ರಂದು ಅಪಹರಣಕಾರರಿಂದ ಬಿಡುಗಡೆ ಹೊಂದಿದರು. ಬಿಡುಗಡೆಯ ನಂತರ ಅಲ್ಲಿನ ಭಾರತದ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ನಂತರ ದೆಹಲಿಗೆ ಬಂದಿಳಿದರು. ಅಲ್ಲಿಂದ ಮುಂಬೈಗೆ ಬಂದು ಕುಟುಂಬ ಸದಸ್ಯರ ಜೊತೆ ಕಾರಿನಲ್ಲಿ ಮಂಗಳೂರಿಗೆ ಬಂದಿಳಿದರು.
ಅಪಹರಣಕಾರರಿಂದ ಬಿಡುಗಡೆಯಾಗಿ ಬಂದಿರುವ 39ರ ಹರೆಯದ ನಯೀಮ್ ತೀವ್ರ ಬಳಲಿದ್ದರೂ ಸಾವಿನ ದವಡೆಯಿಂದ ಪಾರಾಗಿ ಬಂದ ತಮ್ಮ ಸಂತಸವನ್ನು ಮತ್ತು ಅಪಹರಣದ ಕಥೆಯನ್ನು ಪತ್ರಕರ್ತರೊಂದಿಗೆ ಹಂಚಿಕೊಂಡರು.
"ನಾನು ಮತ್ತು ನನ್ನ ನೇಪಾಳಿ ಸ್ನೇಹಿತ ವಾಯುವಿಹಾರಕ್ಕೆಂದು ತೆರಳುತ್ತಿದ್ದಾಗ ಮೂರ್ನಾಲ್ಕು ವ್ಯಕ್ತಿಗಳ ತಂಡವೊಂದು ಬಂದು ನಮ್ಮನ್ನು ಬಲವಂತವಾಗಿ ಕರೆದೊಯ್ಯಿತು. ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿದ ಅವರು, ಅಜ್ಞಾತ ಸ್ಥಳಕ್ಕೆ ನಮ್ಮನ್ನು ಸಾಗಿಸಿದರು. ಕಾಬೂಲ್ ಪೊಲೀಸರ ದಾಳಿಗೆ ಬೆದರಿ ನಮ್ಮನ್ನು ಬಿಡುಗಡೆ ಮಾಡಿದರು. ಆದರೆ, ಬಿಡುಗಡೆ ಮಾಡುವ ಮೊದಲು ಮುಂದೆ ಯಾವತ್ತೂ ನಮ್ಮ ದೇಶಕ್ಕೆ ಮರಳಬಾರದು ಎಂದು ತಾಕೀತು ಮಾಡಿದರು. ಆದರೆ ಒಂದು ಗಮನಿಸುವ ಅಂಶವೆಂದರೆ ಅಲ್ಲಿ ಅಪಹರಿಸಿದ ವ್ಯಕ್ತಿಗಳನ್ನು ಕೊಲ್ಲುವುದು ಮಾಮೂಲಿ. ಆದರೆ ಅವರು ನಮ್ಮನ್ನು ಬಿಡುಗಡೆ ಮಾಡಲು ಒಪ್ಪಿದ್ದು, ಮತ್ತೊಮ್ಮೆ ಹುಟ್ಟಿ ಬಂದಾಂತಾಯಿತು" ಎಂದು ನರಕಸದೃಶ ಅನುಭವವನ್ನು ಬಿಚ್ಚಿಟ್ಟರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications