ಸೋಲಿನ ಆತ್ಮಾವಲೋಕನ ಮಾಡಿಕೊಂಡ ಕಾಂಗ್ರೆಸ್
ನವದೆಹಲಿ, ಮೇ 27: ಪಕ್ಷದ ಸೋಲಿನ ಚಿಂತನ ಮಂಥನ ಮತ್ತು ಮುಂದಿನ ಕಾರ್ಯಗಳ ಬಗ್ಗೆ ಕುರಿತಂತೆ ಚರ್ಚಿಸಲು ಕಾಂಗ್ರೆಸ್ ಹೈಕಮಾಂಡ್ ಕರೆದಿದ್ದ ಸಭೆಗೆ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಹಿರಿಯ ಮುಖಂಡ ಧರ್ಮಸಿಂಗ್ ಪಾಲ್ಗೊಂಡು ಚುನಾವಣಾ ವರದಿಯನ್ನು ಪಕ್ಷದ ವರಿಷ್ಠರಿಗೆ ಸಲ್ಲಿಸಿದರು.
ಕಾಂಗ್ರೆಸ್ ಪಕ್ಷದ ಸೋನಿಯಾ ಗಾಂಧಿ ಸೇರಿದಂತೆ ರಾಷ್ಟ್ರೀಯ ನಾಯಕರೊಂದಿಗೆ ದೀಘ್ರ ಸಮಾಲೋಚನೆ ನಡೆಸಿದ ಈ ಇಬ್ಬರು ನಾಯಕರು, ಪಕ್ಷದ ಕಳಪೆ ಪ್ರದರ್ಶನದ ಬಗ್ಗೆ ಆತ್ಮಾವಲೋಕನ ನಡೆಸಿದರು. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಮಾಡುವ ಏನೇಲ್ಲಾ ಮಾಡಬೇಕು ಎನ್ನುವ ಕುರಿತು ಸಮಗ್ರವಾಗಿ ಚರ್ಚೆ ನಡೆಸಿದರು.
ಬಿಜೆಪಿ ಬಹುಮತಕ್ಕೆ ಮೂರು ಶಾಸಕರು ಕಡಿಮೆಯಿದ್ದರಿಂದ ಜೆಡಿಎಸ್ ಜತೆಗೆ ಮತ್ತೊಮ್ಮೆ ಕೈಜೋಡಿಸುವುದನ್ನು ಸ್ಪಷ್ಟವಾಗಿ ನಿರಾಕರಿಸಿದ ಸೋನಿಯಾ ಗಾಂಧಿ, ನಾವು ಈ ಹಿಂದೆ ಇದರಿಂದ ಪಾಠ ಕಲಿತಿದ್ದೇವೆ. ಅಂತಹ ಸಾಹಸಕ್ಕೆ ಕೈಹಾಕದೇ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ಸಮರ್ಥವಾಗಿ ಕೆಲಸ ಮಾಡಿ ಎಂದು ಕಿವಿ ಮಾತು ಹೇಳಿದ್ದಾರೆ.
ಕಳೆದ 20 ತಿಂಗಳ ಅವಧಿಯಲ್ಲಿ ಜೆಡಿಎಸ್ ಜತೆಗೆ ಮೈತ್ರಿ ಮಾಡಿಕೊಂಡು ಎದುರಿಸಿದ ಸಮಸ್ಯೆಗಳು ಸಾಕಷ್ಟಿವೆ. ಆದ್ದರಿಂದ ಸರ್ಕಾರ ರಚನೆಯ ಕೆಲಸವನ್ನು ಕೈಬಿಟ್ಟು, ಪ್ರತಿಪಕ್ಷ ಸ್ಥಾನದಲ್ಲಿ ಕುಳಿತು ಪಕ್ಷ ಸಂಘಟನೆ ಕೆಲಸ ಮಾಡಿ ಎಂದು ಹೇಳಿದ್ದಾರೆ. ಗುಜರಾತ್, ಪಂಜಾಬ್, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಉತ್ತರಖಂಡ ರಾಜ್ಯಗಳಲ್ಲಿ ಈಗಾಗಲೇ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಿದೆ. ಕರ್ನಾಟಕದಲ್ಲೂ ಕೂಡಾ ಸೋಲಿನ ಸರಪಳಿ ಮುಂದುವರೆದಿದೆ. ಈ ಹಿನ್ನಲೆಯಲ್ಲಿ ಅವಸರವಾಗಿ ಸರ್ಕಾರ ರಚಿಸಿ ಪಕ್ಷ ಸೋಲಿಸುವ ಬದಲಾಗಿ ಆತ್ಮಾವಲೋಕನ ಮಾಡಿಕೊಳ್ಳಿ, ಪಕ್ಷವನ್ನು ಮತ್ತೆ ಮುಂಚೂಣಿಗೆ ತರುವ ಯತ್ನವನ್ನು ಮಾಡಿ ಎಂದು ಸಲಹೆ ನೀಡಿದ್ದಾರೆ.
ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲರಾಗಿ ಧರ್ಮಸಿಂಗ್ ನೇಮಕವಾಗುವ ಸಾಧ್ಯತೆಗಳಿವೆ. ಮಂಗಳವಾರ ನಡೆದ ಕಾಂಗ್ರೆಸ್ ಸಭೆಯಲ್ಲಿ ಧರ್ಮಸಿಂಗ್ ರಾಜ್ಯಪಾಲರಾಗಿ ನೇಮಕ ಮಾಡುವಂತೆ ವರಿಷ್ಠರಿಗೆ ಜತೆಗೆ ಚರ್ಚಿಸಿದ್ದಾರೆ. ಪಕ್ಷ ಬಯಸಿದಲ್ಲಿ ರಾಜ್ಯಪಾಲನಾಗಲು ಸಿದ್ಧ ಎಂದು ಧರ್ಮಸಿಂಗ್ ಸ್ಪಷ್ಟಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)