ಲಂಡನ್ ಲೇಬರ್ ಪಕ್ಷಕ್ಕೂ ಗುಲ್ಬರ್ಗಕ್ಕೂ ನಂಟು
ಗುಲ್ಬರ್ಗ, ಮೇ 20: ಲಂಡನ್ ಲೇಬರ್ ಪಕ್ಷದ ಸಂಸತ್ ಸದಸ್ಯ ಡಾ.ನೀರಜ್ ಪಾಟೀಲ್ ತಾಲ್ಲೂಕಿನ ಕಮಲಾಪುರದಲ್ಲಿ ಲಂಡನ್ ಮಾದರಿಯ ಮತದಾರರ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಈ ಮೂಲಕ ಹಳ್ಳಿಗಳಲ್ಲಿ ಜನರಿಗೆ ಜಾಗೃತಿ ಮೂಡಿಸಲು ಅವರು ಯಶಸ್ವಿಯಾಗಿದ್ದಾರೆ.
ನೀರಜ್ ಪಾಟೀಲ್ ಆಯೋಜಿಸಿದ್ದ ಈ ಜಾಗೃತಿ ಕಾರ್ಯಕ್ರಮಕ್ಕೆ ಭಾರಿ ಜನಸ್ಪಂದನ ವ್ಯಕ್ತವಾಗಿದ್ದು, ಸಾರ್ವಜನಿಕರು ತಮ್ಮ ಅನೇಕ ಸಮಸ್ಯೆಗಳನ್ನು ಜನಪ್ರತಿನಿಧಿಗಳ ಮುಂದಿಟ್ಟರು. ಕೆಲವರು ತಮ್ಮ ಶಾಸಕರ ದಿವ್ಯ ನಿರ್ಲಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯವಾಗಿ ಗುಲ್ಬರ್ಗಾ ಜಿಲ್ಲೆಯಲ್ಲಿನ ಜ್ವಲಂತ ಸಮಸ್ಯೆಯಾದ ಕುಡಿಯುವ ನೀರು, ರಸ್ತೆ, ಪಡಿತರ ಚೀಟಿ ಅವ್ಯವಸ್ಥೆ ಸೇರಿದಂತೆ ಅನೇಕ ಮೂಲಭೂತ ಸಮಸ್ಯೆಗಳ ಚರ್ಚೆ ನಡೆಸಲಾಯಿತು. ಮಾಜಿ ಸಚಿವ ರೇವು ನಾಯಕ ಬೆಳಮಗಿ ಅವರಿಗೆ ಕ್ಷೇತ್ರದ ಅಭಿವೃದ್ಧಿ ಹಿನ್ನಡೆ ಕುರಿತು ವಿವಿಧ ಪ್ರಶ್ನೆಗಳಿಂದ ಪೇಚಿಗೆ ಸಿಲುಕುವ ಪ್ರಸಂಗ ಎದುರಾಯಿತು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕ ರೇವು ನಾಯರ ಬೆಳಮಗಿ(ಬಿಜೆಪಿ), ಚಂದ್ರಿಕಾ ಪರಮೇಶ್ವರಿ(ಕಾಂಗ್ರೆಸ್), ಸಿ.ಗುರುನಾಥ್(ಜೆಡಿಎಸ್) ಅವರು ಮಾತನಾಡಿ, ತಾವು ಆರಿಸಿ ಬಂದಲ್ಲಿ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ನೀರಜ್ ಪಾಟೀಲ್ , ಈ ಚುನಾವಣೆಯಲ್ಲಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ, ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕರನ್ನು ಆರಿಸಿ ಕಳಿಸಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.
(ದಟ್ಸ ಕನ್ನಡ ವಾರ್ತೆ)