ದಿಗ್ಗಜರ ಪೈಪೋಟಿಗೆ ಸಾಕ್ಷಿಯಾದ ಎರಡನೇ ಹಂತ
ಬೆಂಗಳೂರು, ಮೇ 16: ಹಲವಾರು ಕಾರಣಗಳಿಂದ ತೀವ್ರ ಕುತೂಹಲ ಉಂಟು ಮಾಡಿರುವ ಎರಡನೇ ಹಂತದ ಚುನಾಣಾ ಕಣದಲ್ಲಿ 24 ಮಾಜಿ ಮಂತ್ರಿಗಳು, 25 ಮಹಿಳಾ ಅಭ್ಯರ್ಥಿಗಳು, 3 ಹಾಲಿ ಸಂಸದರು, 4 ಮಾಜಿ ಸಂಸದರು ಸ್ಪರ್ಧೆಯಲ್ಲಿದ್ದಾರೆ. 21 ಮೀಸಲು ಕ್ಷೇತ್ರಗಳಲ್ಲಿ ಶುಕ್ರವಾರ ಭಾರಿ ಭದ್ರತೆಯೊಂದಿಗೆ ಮತದಾನ ನಡೆಯಿತು.
ಮತದಾರರ ಪಟ್ಟಿಯಲ್ಲಿನ ಗೊಂದಲ. ಮೂಲಭೂತ ಸೌಲಭ್ಯಗಳಿಲ್ಲದೆ ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು, ಇದನ್ನು ತಿರಸ್ಕರಿಸಿ ಮತ ಹಾಕಿದ ಒಬ್ಬನಿಗೆ ಗೂಸಾ. ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಚಿತ್ರದುರ್ಗ ಜಿಲ್ಲೆಯ ತುರುವನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘರ್ಷಣೆ ಮೂವರಿಗೆ ಗಾಯ. ಈ ರೀತಿಯ ಸಣ್ಣಪುಟ್ಟ ಘಟನೆಗಳನ್ನು ಹೊರತು ಪಡಿಸಿದರೆ ಶುಕ್ರವಾರ ಹತ್ತು ಜಿಲ್ಲೆಗಳಲ್ಲಿ ನಡೆದ ಎರಡನೇ ಹಂತದ ಚುನಾವಣೆ ಬಹುತೇಕ ಶಾಂತಿಯುತವಾಗಿತ್ತು.
ತಾವು ಹರಕೆಯ ಕುರಿಯಲ್ಲ ಎಂದು ಎಸ್.ಬಂಗಾರಪ್ಪ, ತಾವೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿಕೊಂಡಿರುವ ಬಿ.ಎಸ್.ಯಡಿಯೂರಪ್ಪ ಇಂದು ಕ್ರಮವಾಗಿ ಸೊರಬ ಹಾಗೂ ಶಿಕಾರಿಪುರದಲ್ಲಿ ಮತ ಚಲಾಯಿಸಿದರು. ಬಂಗಾರಪ್ಪ ಪತ್ನಿ ಶಕುಂತಲಾ, ಪುತ್ರರಾದ ಮಧು ಬಂಗಾರಪ್ಪ, ಕುಮಾರ ಬಂಗಾರಪ್ಪ ತಮ್ಮ ಪತ್ನಿಯೊಂದಿಗೆ ಮತದಾನ ಮಾಡಿದರು. ಯಡಿಯೂರಪ್ಪ ತಮ್ಮ ಪುತ್ರರು ಹಾಗೂ ಪುತ್ರಿಯರೊಂದಿಗೆ ಇಂದು ಮತ ಹಾಕಿದರು. ಚಿಕ್ಕಮಗಳೂರಿನ ಬಿಜೆಪಿ ಅಭ್ಯರ್ಥಿ ಸಿಟಿ ರವಿ ಪತ್ನಿ ಸಮೇತ ಎಲ್ಲರಿಗಿಂತಲೂ ಮೊದಲೇ ಮತ ಚಲಾಯಿಸಿದ್ದು ವಿಶೇಷವಾಗಿತ್ತು.
ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪ, ಬಿಜೆಪಿ ಅಭ್ಯರ್ಥಿ ಆಯನೂರು ಮಂಜುನಾಥ್ ಆಯನೂರಿನಲ್ಲಿ, ತೀರ್ಥಹಳ್ಳಿಯ ಅರಗದಲ್ಲಿ ಅರಗ ಜ್ಞಾನೇಂದ್ರ, ಸಾಗರದಲ್ಲಿ ಕಾಗೋಡು ತಿಮ್ಮಪ್ಪ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ಮತ ಚಲಾಯಿಸಿದರು. ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ, ಎಸ್.ಎಸ್.ಮಲ್ಲಿಕಾರ್ಜುನ್, ಮಹಿಮಾ ಪಟೇಲ್, ವಡ್ನಾಳ್ ರಾಜಣ್ಣ, ಎಂ.ಪಿ.ರೇಣುಕಾಚಾರ್ಯ ಮುಂತಾದ ಅಭ್ಯರ್ಥಿಗಳು ಮತದಾನ ಮಾಡಿದರು.
ಸಾಕಷ್ಟು ಕುತೂಹಲ ಕೆರಳಿಸಿರುವ ಬಳ್ಳಾರಿಯಲ್ಲಿ ರೆಡ್ಡಿ ಸಹೋದರರು ಬೆಳಗ್ಗೆಯೇ ತಮ್ಮ ಕುಟುಂಬ ಹಾಗೂ ಅಪಾರ ಬೆಂಬಲಿಗರೊಂದಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಕರುಣಾಕರರೆಡ್ಡಿ,ಜನಾರ್ದನರೆಡ್ಡಿ, ಶ್ರೀರಾಮುಲು, ದಿವಾಕರ್ ಬಾಬು, ಕೆ.ಸಿ.ಕೊಂಡಯ್ಯ, ಕೋಳೂರು ಬಸವೇಗೌಡ, ಹೂವಿನಹಡಗಲಿಯಲ್ಲಿ ಎಂ.ಪಿ.ಪ್ರಕಾಶ್, ಕೊಟ್ಟೂರಿನಲ್ಲಿ ಅನಿಲ್ ಲಾಡ್, ಸಂತೋಷ್ ಲಾಡ್ ಸೇರಿದಂತೆ ಕಣದಲ್ಲಿರುವ ಭಾರಿ ಕುಳಗಳು ಮತದಾನ ಮಾಡಿದರು. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಹರಪನಹಳ್ಳಿ ಕ್ಷೇತ್ರದಲ್ಲಿ ಎಂ.ಪಿ.ಪ್ರಕಾಶ್ ಹಾಗೂ ಕರುಣಾಕರರೆಡ್ಡಿ ಮತ ಚಲಾಯಿಸಿದ್ದು ವಿಶೇಷವಾಗಿತ್ತು.
ಕೊಪ್ಪಳದಲ್ಲಿ ಬಸರಾಜರಾಯರೆಡ್ಡಿ, ಇಕ್ಬಾಲ್ ಅನ್ಸಾರಿ ಮತ ಚಲಾಯಿಸಿದರು. ಪುತ್ತೂರಿನಲ್ಲಿ ಡಿ.ವಿ.ಸದಾನಂದಗೌಡ, ಶಕುಂತಲಾ ಶೆಟ್ಟಿ, ಕಾರ್ಕಳದಲ್ಲಿ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪಮೊಯ್ಲಿ,
ಉಡುಪಿಯಲ್ಲಿ ವಿ.ಎಸ್.ಆಚಾರ್ಯ, ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್, ಮಂಗಳೂರಿನಲ್ಲಿ ಜನಾರ್ದನ ಪೂಜಾರಿ, ಡಿ.ರಮಾನಾಥ ರೈ, ವಸಂತ್ ಬಂಗೇರಾ, ಜಯಪ್ರಕಾಶ್ ಹೆಗಡೆ, ಧರ್ಮಸ್ಥಳದಲ್ಲಿ ವೀರೇಂದ್ರ ಹೆಗಡೆ, ಅಳಿಯಾಳದಲ್ಲಿ ಮಾಜಿ ಸಚಿವ ಆರ್.ವಿ.ದೇಶಪಾಂಡೆ ತಮ್ಮ ತಮ್ಮ ಮತಗಳನ್ನು ಚಲಾಯಿಸಿದರು.
ಒಟ್ಟಾರೆ ಇಂದು ಸಂಜೆ 4 ಗಂಟೆಯ ವೇಳೆಗೆ ಶೇ. 50.2ರಷ್ಟು ಮತದಾನ ದಾಖಲಾಗಿದೆ. ಜಿಲ್ಲಾವಾರು ಮತದಾನದ ಪ್ರಮಾಣ, ಉಡುಪಿ ಶೇ.56, ಚಿತ್ರದುರ್ಗ ಶೇ.49.2, ಕೊಪ್ಪಳ ಶೇ.50.6, ರಾಯಚೂರು ಶೇ. 41, ದಕ್ಷಿಣ ಕನ್ನಡ ಶೇ.58, ಉತ್ತರ ಕನ್ನಡ ಶೇ.48,ಚಿಕ್ಕಮಗಳೂರು ಶೇ. 54, ಶಿವಮೊಗ್ಗ ಶೇ.47.1, ಬಳ್ಳಾರಿ ಶೇ. 49,ದಾವಣಗೆರೆ ಶೇ.52ರಷ್ಟು ಮತದಾನ ನಡೆದಿದೆ.
ಅಲ್ಲಲ್ಲಿ ಏನೇನು?
ಮತಗಟ್ಟೆ ಅಧಿಕಾರಿಯೊಬ್ಬರು ಕಾಂಗ್ರೆಸ್ ಪರ ಮತಯಾಚಿಸಿದ್ದಾರೆಂದು ಚಿತ್ರದುರ್ಗದ ಕವಾಡಿಗರ ಹಟ್ಟಿಯ ಮತದಾರರು ದೂರಿದ್ದಾರೆ. ಜಯಣ್ಣ ಎಂಬ ಮತಗಟ್ಟೆ ಅಧಿಕಾರಿ ಕಾಂಗ್ರೆಸ್ ಪಕ್ಷಕ್ಕೆ ಮತಹಾಕುವಂತೆ ಆಮಿಷವೊಡ್ಡಿದ್ದ. ಈ ಸಂಬಂಧ ಗ್ರಾಮಸ್ಥರು ಕುಪಿತರಾಗಿ ಆತನನ್ನು ಕೂಡಲೆ ಬದಲಾಯಿಸಲು ಆಗ್ರಹಿಸಿದರು. ಗ್ರಾಮಸ್ಥರು ಅಧಿಕಾರಿಯ ವಿರುದ್ಧ ತೀವ್ರವಾಗಿ ಪ್ರತಿಭಟಿಸಿದ್ದಾರೆ.
****
ರಾಯಚೂರಿನ ಸಿಂಧನೂರು ಪಟ್ಟಣದ ಸಿಪಿಎಸ್ ಮತಗಟ್ಟೆ ಸಮೀಪ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಚಿತ್ರದುರ್ಗದ ಪಾಪೇನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದರೂ ಅದನ್ನು ತಿರಸ್ಕರಿಸಿ ಮತಹಾಕಿದ ಒಬ್ಬನನ್ನು ಗ್ರಾಮಸ್ಥರು ಥಳಿಸಿದ್ದಾರೆ. ತಮ್ಮ ಗ್ರಾಮಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸದ ಕಾರಣ ತಾವು ಮತದಾನ ಬಹಿಷ್ಕರಿಸಿದ್ದಾಗಿ ಗ್ರಾಮಸ್ಥರು ತಿಳಿಸಿದರು.
****
ಮತಪಟ್ಟಿಯಲ್ಲಿ ಗೊಂದಲ ಉಂಟಾಗಿ ಚಿತ್ರದುರ್ಗ ಜಿಲ್ಲೆಯ ಹಲವು ಗ್ರಾಮಸ್ಥರು ಮತದಾನವನ್ನು ಬಹಿಷ್ಕರಿಸಿದ್ದಾರೆ. ಜಿಲ್ಲೆಯ ಪಾಪೇನಹಳ್ಳಿ, ಬಾಣೆಗೆರೆ, ಕೋಟೆಹಾಳ ಗ್ರಾಮಸ್ಥರು ಮತದಾನ ಧಿಕ್ಕರಿಸಿದ್ದಾರೆ. ಇಲ್ಲೂ ಮೂಲಭೂತ ಸೌಲಭ್ಯಗಳದ್ದೇ ಸಮಸ್ಯೆ. ಸಾರ್ವಜನಿಕರು ರಾಜಕಾರಣಿಗಳು ಹಾಗೂ ಚುನಾವಣೆ ಆಯೋಗದ ವಿರುದ್ಧ ಪ್ರತಿಭಟನೆ ನಡೆಸಿ, ಧಿಕ್ಕಾರ ಕೂಗಿ ಮತದಾನಕ್ಕೆ ಬಹಿಷ್ಕಾರ ಹಾಕಿ ತಮ್ಮ ಅಸಮಧಾನವನ್ನು ತೋಡಿಕೊಂಡರು.
(ದಟ್ಸ್ಕನ್ನಡ ವಾರ್ತೆ)












Click it and Unblock the Notifications