ಶೇನ್ ವಾರ್ನ್ ತವರಿಗೆ: ಅಲ್ಲಗಳೆದ ಲಲಿತ್ ಮೋದಿ
ನವದೆಹಲಿ, ಮೇ 16: ಗುಲಾಬಿ ನಗರ ಎಂದೇ ಖ್ಯಾತಿ ಹೊಂದಿರುವ ಜೈಪುರದಲ್ಲಿ ಉಗ್ರರು ನಡೆಸಿದ ಸ್ಫೋಟದ ಹಿನ್ನಲೆಯಲ್ಲಿ ರಾಜಸ್ತಾನ ರಾಯಲ್ಸ್ ತಂಡದ ನಾಯಕ ಶೇನ್ ವಾರ್ನ್, ಶೇನ್ ವಾಟ್ಸನ್ ಹಾಗೂ ಗ್ರಾಹಮ್ ಸ್ಮಿತ್ ತವರಿಗೆ ಮರಳಲಿದ್ದಾರೆ ಹಾಗೂ ಬೆಂಗಳೂರು ತಂಡ ಇಲ್ಲಿಗೆ ಬರುವುದು ಅನುಮಾನಎನ್ನುವುದು ಕೇವಲ ಉಪಾಪೋಹ ಎಂದು ಐಪಿಎಲ್ ಮುಖ್ಯಸ್ಥ ಲಲಿತಾ ಮೋದಿ ಸ್ಪಷ್ಟಪಡಿಸಿದ್ದಾರೆ.
ಶನಿವಾರ ಜೈಪುರದ ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ಬೆಂಗಳೂರು ರಾಯಲ್ಸ್ ತಂಡದೊಂದಿಗೆ ರಾಜಸ್ತಾನ ರಾಯಲ್ಸ್ ತಂಡ ಸೆಣಸಲಿದೆ. ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ತಂಡ ಈ ಮುಂಚೆ ಪಂದ್ಯದ ಸ್ಥಳಾಂತರಕ್ಕೆ ಕೋರಿದ್ದರು. ಆದರೆ ಸೂಕ್ತ ಭದ್ರತೆಯ ಭರವಸೆಯ ಮೇರೆಗೆ ರಾಹುಲ್ ಪಡೆ ಆಡಲು ಒಪ್ಪಿಕೊಂಡಿದೆ. ಜೈಪುರಕ್ಕೆ ರಾಹುಲ್ ಹಾಗೂ ಕುಂಬ್ಳೆ ಸಂಸಾರ ಸಮೇತ ಬಂದಿದ್ದಾರೆ. ಜತೆಗೆ ಜೈಪುರ ತಂಡದ ಆಟಗಾರರು ಗೋವಾದಿಂದ ಜೈಪುರದತ್ತ ಪ್ರಯಾಣ ಬೆಳಸಿದ್ದಾರೆ ಎಂದು ಲಲಿತ್ ಮೋದಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ರಾಜಸ್ತಾನ ರಾಯಲ್ಸ್ ತಂಡದ ಎಲ್ಲ ಆಟಗಾರರು ಮಾನಸಿಕವಾಗಿ ಸಿದ್ದಗೊಂಡಿದ್ದಾರೆ. ಕಳೆದ ಮಂಗಳವಾರ ಜೈಪುರದಲ್ಲಿ ನಡೆದಿರುವ ಸ್ಫೋಟ ಪ್ರಕರಣ ಆಟಗಾರರಲ್ಲಿ ಭಯ, ಆತಂಕ ಮೂಡಿರುವುದು ನಿಜ. ಕೆಲವು ಆಟಗಾರರು ತಮ್ಮ ನೋವನ್ನು ತೋಡಿಕೊಂಡಿದ್ದು ಸತ್ಯ. ಅಂತಹ ಆಟಗಾರರಿಗೆ ವಾಸ್ತವಾಂಶದ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಪರಿಣಾಮವಾಗಿ ಎಲ್ಲ ಆಟಗಾರರೂ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಆಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಅವರು ಹೇಳಿದರು.
ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಭಾರಿ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದ್ದು, ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕ್ರಿಕೆಟ್ ವೀಕ್ಷಿಸಲು ಬರುವ ಕ್ರೀಡಾಭಿಮಾನಿಗಳು ಕ್ರೀಡಾಂಗಣದೊಳಗೆ ಕೈಚೀಲ, ಬಾಟಲ್ಸ್ ಮತ್ತು ಲೈಟರ್ ಗಳನ್ನು ಒಳಗೆ ತರವಂತಿಲ್ಲ ಹಾಗೂ ಆಟಗಾರರಿಗೆ ವಿಶೇಷ ಭದ್ರತೆಯನ್ನು ನೀಡಲಾಗಿದ್ದು, ಯಾವ ಅನಾಹುತಕ್ಕೂ ಆಸ್ಪದ ನೀಡುವುದಿಲ್ಲ ಎಂದು ಮೋದಿ ಸ್ಪಷ್ಟಪಡಿಸಿದ್ದಾರೆ.
ರಾಜಸ್ತಾನ ಸರ್ಕಾರ ಪಂದ್ಯಕ್ಕೆ ಹೆಚ್ಚಿನ ಭದ್ರತೆ ನಿಯೋಜನೆಗೆ ಸಹಮತ ವ್ಯಕ್ತಪಡಿಸಿದ್ದು, ಕ್ರೀಡಾಂಗಣದೊಳಗೆ ಆಗಮಿಸುವ ಎಲ್ಲರನ್ನೂ ತಪಾಸಣೆ ಮಾಡಿ ಒಳಗೆ ಬಿಡಲಾಗುವುದು. ಹಾಗೆಯೇ ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳ ಕಾರ್ಯನಿರ್ವಹಸಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)