ಶಿಕಾರಿಪುರದಲ್ಲಿ ಕಾವೇರಿದ ಚುನಾವಣೆ ಜ್ವರ
ಬೆಂಗಳೂರು,ಮೇ 16: ಇಬ್ಬರು ಮಾಜಿಮುಖ್ಯಮಂತ್ರಿಗಳ ಮಹಾಸಮರಕ್ಕೆ ಸಾಕ್ಷಿಯಾಗಿರುವ ಶಿಕಾರಿಪುರದಲ್ಲಿಂದು ಅಘೋಷಿತ ಬಂದ್ ವಾತಾವರಣ ಕಂಡು ಬಂದಿದೆ. ಅತೀ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿರುವ ಚುನಾವಣೆ ಆಯೋಗ ಸಾಕಷ್ಟು ಬಿಗಿ ಭದ್ರತೆ ಕೈಗೊಂಡಿದೆ. ಪಟ್ಟಣದ ತುಂಬ ಖಾಕಿಧಾರಿಗಳು ತೆಗೆದುಕೊಂಡಿರುವ ಕಟ್ಟುನಿಟ್ಟಿನ ಕ್ರಮದಿಂದ ಶಾಂತಿಯುತವಾಗಿ ಮತದಾನ ಸಾಗಿದೆ.
ರಾಜ್ಯ ರಾಜಕಾರಣದ ಮದಗಜಗಳೆಂದೇ ಖ್ಯಾತಿಯಾಗಿರುವ ಈ ಇಬ್ಬರು ಮಾಜಿಮುಖ್ಯಮಂತ್ರಿಗಳ ಹಣೆಬರಹ ಬರೆಯುವ ಈ ಚುನಾವಣೆಗೆ ಭಾರಿ ಬಿಗಿ ಭದ್ರತೆ ನೀಡಿದ್ದರಿಂದ ಪಟ್ಟಣದಲ್ಲಿ ಅಘೋಷಿತ ಬಂದ್ ವಾತಾವರಣ ಕಂಡು ಬಂದಿತು. ಬೀಡಾ ಅಂಗಡಿ, ಬಟ್ಟೆ ವ್ಯಾಪಾರಿಗಳು, ಹಣ್ಣಿನ ಅಂಗಡಿ, ಕಿರಾಣಿ ವ್ಯಾಪಾರಸ್ಥರು, ಗ್ಯಾರೇಜ್, ಗೂಡಂಗಡಿ ಮತ್ತಿತರ ಸಣ್ಣಪುಟ್ಟ ವ್ಯಾಪಾರಿಗಳು ಅಂಗಡಿಗಳನ್ನು ಬಂದ್ ಮಾಡಿಕೊಂಡು ಮತದಾನದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿತ್ತು.
ಮಾಜಿ ಸಿಎಂಗಳ ಹಣಾಹಣಿ ಕ್ಷೇತ್ರವಾಗಿದ್ದರಿಂದ ಚುನಾವಣೆ ಆಯೋಗ ಭಾರಿ ಪ್ರಮಾಣದ ಬಂದೋಬಸ್ತ್ ನ್ನು ನಿಯೋಜಿಸಿದೆ. ಕೆಲವು ಚಿಕ್ಕಪುಟ್ಟ ಘಟನೆಗಳನ್ನು ಬಿಟ್ಟರೆ ಕ್ಷೇತ್ರದಾದ್ಯಂತ ಎಲ್ಲಡೆ ಶಾಂತಿಯುತ ಮತದಾನವಾಗಿರುವ ಬಗ್ಗೆ ವರದಿಯಾಗಿದೆ. ಪ್ರತಿ ಗಲ್ಲಿಗಲ್ಲಿಯ ಜನರು ನಿರ್ಭೀತಿಯಿಂದ ಮತಗಟ್ಟೆಗೆ ಬಂದು ಮತದಾನ ಮಾಡುತ್ತಿರುವುದು ಕಂಡು ಬಂದಿತು.
ಉಭಯ ನಾಯಕರ ಬಗ್ಗೆ ಮತದಾರರಲ್ಲಿ ವಿಭಿನ್ನ ಅಭಿಪ್ರಾಯಗಳು ಮೂಡಿ ಬಂದಿದ್ದು, ಇಬ್ಬರು ಪ್ರತಿಷ್ಠೆಯುಳ್ಳ ನಾಯಕರು, ಯಾರು ಗೆದ್ದರೂ ಕ್ಷೇತ್ರಕ್ಕೆ ಒಳ್ಳೆಯ ಕೆಲಸ ಮಾಡಲಿದ್ದಾರೆ ಎನ್ನುತ್ತಾರೆ ಮತದಾರ ಪ್ರಭು. ಈಗಾಗಲೇ ಶಿವಮೊಗ್ಗ ಜಿಲ್ಲೆ ನಾಲ್ಕು ಜನ ಮಖ್ಯಮಂತ್ರಿಗಳನ್ನು ರಾಜ್ಯಕ್ಕೆ ಕೊಡುಗೆಯಾಗಿ ನೀಡಿದೆ. ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಯಡಿಯೂರಪ್ಪ, ಈ ಚುನಾವಣೆಯಲ್ಲಿ ಆಯ್ಕೆಯಾಗಿ, ರಾಜ್ಯದ ಜನತೆ ಬಿಜೆಪಿಗೆ ಆಶೀರ್ವಾದ ಮಾಡಿದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಏರುವುದು ಸ್ಪಷ್ಟವಾಗಿದ್ದರಿಂದ ಅಲ್ಲಿಯ ಮತದಾರ ಯಡಿಯೂರಪ್ಪ ಅವರ ಬಗ್ಗೆ ಹೆಚ್ಚಿನ ಒಲವು ತೋರಿಸಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ.
(ಯುಎನ್ಐ)