ಹರಪನಹಳ್ಳಿಯಲ್ಲಿ 'ಪ್ರಕಾಶಿಸಿದ' ರಾಹುಲ್
ಹರಪನಹಳ್ಳಿ, ಮೇ 12: ಸ್ಥಿರ ಮತ್ತು ಸದೃಢ ಸರ್ಕಾರಕ್ಕೆ ಕಾಂಗ್ರೆಸ್ ಪಕ್ಷವೇ ಪರ್ಯಾಯ. ರಾಜ್ಯದ ಅಭಿವೃದ್ಧಿಗೆ, ಬಡವರ ಏಳಿಗೆಗೆ ಮತ್ತು ಅಲ್ಪಸಂಖ್ಯಾತರ ಹಿತಾಸಕ್ತಿ ಕಾಯಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಕಾಂಗ್ರೆಸ್ ಪಕ್ಷ ದಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಮತದಾರರಲ್ಲಿ ಇಂದು ಮನವಿ ಮಾಡಿಕೊಂಡರು. ಆಂಗ್ಲ ಭಾಷೆಯಲ್ಲಿದ್ದ ರಾಹುಲ್ಗಾಂಧಿ ಭಾಷಣವನ್ನು ಎಂ.ಪಿ.ಪ್ರಕಾಶ್ ಕನ್ನಡಕ್ಕೆ ಭಾಷಾಂತರಿಸಿ ಹೇಳುತ್ತಿದ್ದದ್ದು ವಿಶೇಷವಾಗಿತ್ತು.
ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಸ್ಪರ್ಧಿಸಿರುವ ಹರಪನಹಳ್ಳಿ ಮತಕ್ಷೇತ್ರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಪ್ರಚಾರ ಭಾಷಣ ಮಾಡಿದ ಅವರು, ಸ್ಥಿರ ಸರ್ಕಾರಕ್ಕೆ ಆದ್ಯತೆಯನ್ನು ಕೊಡಿ, ರಾಜ್ಯದಲ್ಲಿ ಸ್ಥಿರ ಸರ್ಕಾರ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಮತದಾರರಲ್ಲಿ ಭಿನ್ನವಿಸಿಕೊಂಡರು.ಬಳ್ಳಾರಿ ಗಣಿಧಣಿಗಳಿಗೆ ತಕ್ಕ ಪಾಠ ಕಲಿಸಿ ಎಂದು ಹೇಳಿದ ಅವರು, ದುಡ್ಡಿನಿಂದ ಏನನ್ನು ಮಾಡಲು ಸಾಧ್ಯವಿಲ್ಲ. ಜನರ ಸಂಕಷ್ಟಗಳಿಗೆ ಸ್ಪಂದಿಸುವ ನಾಯಕರಿಗೆ ಮಣೆ ಹಾಕಿ. ಎಂ.ಪಿ.ಪ್ರಕಾಶ್ ಹಿರಿಯ ರಾಜಕಾರಣಿಯಾಗಿದ್ದು, ಅವರಿಂದ ಸಮಾಜದ ಎಲ್ಲ ಸ್ತರದ ಅಭಿವೃದ್ಧಿಯನ್ನು ನಿರೀಕ್ಷಿಸಬಹುದು ಎಂದರು.
ಕಾಂಗ್ರೆಸ್ ಪಕ್ಷ ಭಯೋತ್ಪಾದನೆ ಬಗ್ಗೆ ಮೃದುದೋರಣೆ ತಾಳಿದೆ ಎಂದು ಟೀಕಿಸುತ್ತಿರುವ ಬಿಜೆಪಿ ಮುಖಂಡರನ್ನು ತರಾಟೆ ತಗೆದುಕೊಂಡ ರಾಹುಲ್ ಗಾಂಧಿ, ದೇಶದ ಹಿತಕ್ಕೆ ಕಾಂಗ್ರೆಸ್ ಪಕ್ಷದ ಅನೇಕ ಮುಖಂಡರು ಬಲಿದಾನಕ್ಕೆ ಒಳಗಾಗಿರುವುದು ತಿಳಿದಿರುವ ಸಂಗತಿ ಎಂದರು. ಕಾಂದಹಾರ್ ಪ್ರಕರಣದಲ್ಲಿ ಏನಾಯಿತೆಂದು ಬಿಜೆಪಿ ಮುಖಂಡರು ನೆನಪಿಸಿಕೊಳ್ಳಬೇಕು. ಅಂದು ಭಯೋತ್ಪಾದಕರಿಗೆ ಹೆದರಿ ದೇಶದ್ರೋಹಿಗಳನ್ನು ಗೌರವಯುತವಾಗಿ ಬಿಡುಗಡೆಗೊಳಿಸಿದ್ದು ಯಾಕೆ ಎಂದು ಪ್ರಶ್ನಿಸಿದರಲ್ಲದೇ, ಮೃದುಧೋರಣೆ ತಳೆದಿದ್ದು ಯಾರು ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಬಿಜೆಪಿಗೆ ತಿರುಗೇಟು ನೀಡಿದರು.
ಮತದಾರರೇ ಕೋಮುವಾದಿಗಳಿಗೆ ಯಾವ ಕಾರಣಕ್ಕೂ ಮತ ನೀಡಬೇಡಿ ಎಂದ ಅವರು, ಗುಜಾರಾತಿನಲ್ಲಿ ಬಡವರು, ಅಲ್ಪಸಂಖ್ಯಾತರ ಸ್ಥಿತಿ ಶೋಚನೀಯ. ಶಾಂತಿ ಸುಭಿಕ್ಷೆಯಿಂದ ಕೂಡಿದ ಕರ್ನಾಟಕದಲ್ಲಿ ಕೋಮುವಾದಿಗಳ ಕೈಗೆ ಅಧಿಕಾರವನ್ನು ಕೊಡಬೇಕೆ ? ಆದ್ದರಿಂದ ಅನೇಕ ದಶಕಗಳಿಂದಲೂ ಕಾಂಗ್ರೆಸ್ ಜನಪರ ಸರ್ಕಾರ ನೀಡುತ್ತಾ ಬಂದಿದೆ. ಮುಂದೆಯೂ ಬಡವರ ಏಳಿಗೆಗೆ ಸ್ಪಂದಿಸುತ್ತೇವೆ. ನಮ್ಮನ್ನು ಆಶೀರ್ವದಿಸಿ ಎಂದು ಮನವಿ ಮಾಡಿದರು.
ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್, ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಭೈರೇಗೌಡ, ರಾಜ್ಯ ಚುನಾವಣೆ ಉಸ್ತುವಾರಿ ಹೊತ್ತಿರುವ ಕೇಂದ್ರ ಸಚಿವ ಪೃಥ್ವಿರಾಜ ಚವಾಣ್ ಮತ್ತಿತರರು ಉಪಸ್ಥಿತರಿದ್ದರು.
(ದಟ್ಸ್ ಕನ್ನಡ ವಾರ್ತೆ)