ರಾಜ್ ಪ್ರತಿಮೆ ವಿರೂಪ; ಪಂತರಪಾಳ್ಯ ಬಂದ್
ಬೆಂಗಳೂರು, ಮೇ 12: ಮೈಸೂರು ರಸ್ತೆಯ ನಾಯಂಡಹಳ್ಳಿಯಲ್ಲಿ ನಟ ಸಾರ್ವಭೌಮ ಡಾ.ರಾಜ್ಕುಮರ್ ಅವರ ಪ್ರತಿಮೆಯನ್ನು ('ಕಸ್ತೂರಿ ನಿವಾಸ' ಚಿತ್ರದ ಮಾದರಿ) ಕಿಡಿಗೇಡಿಗಳು ವಿರೂಪಗೊಳಿಸಿದ್ದಾರೆ. ಈ ಸಂಬಂಧ ಸೋಮವಾರ ಮೈಸೂರು ರಸ್ತೆಯಲ್ಲಿ ಅಖಿಲ ಕರ್ನಾಟಕ ಶಿವರಾಜ್ ಕುಮಾರ್ ಕನ್ನಡ ವೇದಿಕೆ ರಸ್ತೆ ತಡೆ ನಡೆಸಿತು. ಬೆಂಗಳೂರು-ಮೈಸೂರು ರಸ್ತೆಯಲ್ಲಿ ಕೆಲ ಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಇಂದು ಪಂತರ ಪಾಳ್ಯ ಬಂದ್ಗೆ ಸಹ ಕರೆಕೊಡಲಾಗಿದೆ.
ಘಟನೆಯ ಹಿನ್ನಲೆ
ವರ್ತುಲ ರಸ್ತೆ ವೃತ್ತದಲ್ಲಿ ಅಖಿಲ ಕರ್ನಾಟಕ ಶಿವರಾಜ್ ಕುಮಾರ್ ಕನ್ನಡ ವೇದಿಕೆಯ ಕಾರ್ಯಕರ್ತರು ಕೆಲ ತಿಂಗಳ ಹಿಂದೆ ಡಾ.ರಾಜ್ ಪ್ರತಿಮೆಯನ್ನು ಅನಾವರಣ ಮಾಡಿದ್ದರು. ಆದರೆ, ಕಿಡಿಗೇಡಿಗಳು ಶನಿವಾರ ರಾತ್ರಿ (ಮೇ.10) ರಾಜ್ ಪುತ್ಥಳಿ, ಕೆನ್ನೆ, ತಲೆ, ಕಿವಿ ಹಾಗೂ ಹೆಗಲ ಮೇಲಿದ್ದ ಪಾರಿವಾಳವನ್ನು ಕಲ್ಲಿನಿಂದ ಒಡೆದು ಭಗ್ನಗೊಳಿಸಿದ್ದಾರೆ. ಇಷ್ಟಕ್ಕೆ ತೃಪ್ತರಾಗದ ಕಿಡಿಗೇಡಿಗಳು ಪಾರಿವಾಳವನ್ನು ನಾಯಂಡನಹಳ್ಳಿ ರೈಲ್ವೆ ಗೇಟ್ ಸಮೀಪ ಎಸೆದು ಹೋಗಿದ್ದಾರೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಾಪಕ ಖಂಡನೆ
ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿದ್ದಾರೆ. ಇದಕ್ಕೆ ಕಾರಣಕರ್ತರಾದ ಕಿಡಿಗೇಡಿಗಳನ್ನು ಬಂಧಿಸಬೇಕು. ಹಾಗೆಯೇ ಕರ್ನಾಟಕದಲ್ಲಿರುವ ಡಾ.ರಾಜ್ ಪ್ರತಿಮೆಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಅಖಿಲ ಕರ್ನಾಟಕ ಶಿವರಾಜ್ ಕುಮಾರ್ ಕನ್ನಡ ವೇದಿಕೆ ಅಧ್ಯಕ್ಷ ಎಂ.ಮುನಿಯಪ್ಪ ಆಗ್ರಹಿಸಿದರು. ನೂರಾರು ರಾಜ್ ಅಭಿಮಾನಿಗಳು ಈ ದುಷ್ಕೃತ್ಯವನ್ನು ಖಂಡಿಸಿ ಪ್ರತಿಮೆಯ ಬಳಿ ಪ್ರತಿಭಟಿಸಿದರು. ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
(ದಟ್ಸ್ಕನ್ನಡ ವಾರ್ತೆ)












Click it and Unblock the Notifications