ರಾಹುಲ್ ದ್ರಾವಿಡ್ ಮೇಲೆ ಮಲ್ಯ ಸಿಡಿ'ಗುಂಡು'
ಬೆಂಗಳೂರು, ಮೇ 12 : ಐಪಿಎಲ್ನಲ್ಲಿ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡ ಸತತವಾಗಿ ಸೋಲು ಕಾಣುತ್ತಿರುವುದಕ್ಕೆ ನಾಯಕ ರಾಹುಲ್ ದ್ರಾವಿಡ್ ಮೇಲೆ ತಂಡದ ಒಡೆಯ ವಿಜಯ್ ಮಲ್ಯ ಗೂಬೆ ಕೂರಿಸಿದ್ದಾರೆ.
ಎಂಟರಲ್ಲಿ ಆರನ್ನು ಸೋತು ಪಾಯಿಂಟ್ ಪಟ್ಟಿಯಲ್ಲಿ ತಳ ಕಂಡಿರುವ ರಾಯಲ್ ಚಾಲೇಂಜರ್ಸ್ ತಂಡ ಇಂದು ಕಿಂಗ್ಸ್ ಎಲೆವನ್ ಪಂಜಾಬ್ ತಂಡವನ್ನು ಎದುರಿಸುತ್ತಿದೆ. ಸೋಲಿನ ಹ್ಯಾಂಗೋವರ್ನಿಂದ ಹೊರಬಂದು ಮುಂದಿನ ಪಂದ್ಯಗಳನ್ನು ಗೆದ್ದರೆ ಮಾತ್ರ ರಾಹುಲ್ಗೆ 'ಚೀಯರ್ಸ್' ಇಲ್ಲದಿದ್ದರೆ ದ್ರಾವಿಡ್ 'ಕಿಕ್' ಔಟ್ ಆಗುವುದು ಗ್ಯಾರಂಟಿ.
ಟೆಸ್ಟ್ ತಂಡವೆಂದು ಎಲ್ಲರಿಂದ ಅಪಹಾಸ್ಯಕ್ಕೀಡಾಗಿರುವ ರಾಹುಲ್ ದ್ರಾವಿಡ್ ಮತ್ತು ಹಿಂದಿನ ಸಿಇಓ ಚಾರು ಶರ್ಮಾ ಆಯ್ಕೆ ಮಾಡಿದ ತಂಡದ ಬಗ್ಗೆ ಹನಿಯಷ್ಟೂ ಖುಷಿಯಿಲ್ಲವೆಂದು ಮಲ್ಯ ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಹರಾಜು ಮಾಡುವಾಗ ರಾಹುಲ್ ದ್ರಾವಿಡ್ ಮತ್ತು ಚಾರು ಶರ್ಮಾ ತಾವು ಆಯ್ಕೆ ಮಾಡಿದ್ದ ಪಡೆಯನ್ನು ಸಂಪೂರ್ಣ ನಿರ್ಲಕ್ಷಿಸಿ ತಮಗೆ ಬೇಕಾದ ತಂಡವನ್ನು ಆರಿಸಿಕೊಂಡಿದ್ದಾರೆ. ನನ್ನ ತಲೆಯಲ್ಲಿ ಬೇರೆಯದೇ ತಂಡದ ಕಲ್ಪನೆಯಿತ್ತು, ಆದರೆ ಕ್ರಿಕೆಟ್ ಪರಿಣಿತರ ಆಯ್ಕೆಯ ಮುಂದೆ ನಾನು ಹಿಂದೆಗೆಯಬೇಕಾಯಿತು ಎಂದು ಮಲ್ಯ ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಕೆಂಡ ಕಾರಿದ್ದಾರೆ.
ಎರಡನೇ ಹರಾಜಿನಲ್ಲಿ ಕೂಡ, ರಾಹುಲ್ ಅನುಪಸ್ಥಿತಿಯಲ್ಲಿ ಚಾರು ಶರ್ಮಾ ನನ್ನ ದಾರಿ ತಪ್ಪಿಸಿದರು. ನನ್ನ ಆಯ್ಕೆಯ ತಂಡವನ್ನು ಆರಿಸಲು ಅವಕಾಶವನ್ನೇ ನೀಡಲಿಲ್ಲ. ಚಾರು ಶರ್ಮಾ ಕ್ರಿಕೆಟ್ ಅರ್ಥಮಾಡಿಕೊಂಡಿದ್ದಾರೆ. ಅವರು ತಂಡಕ್ಕೆ ಮೌಲ್ಯ ದೊರಕಿಸಿಕೊಡುತ್ತಾರೆ ಎಂದು ಭಾವಿಸಿದ್ದೆ ಎಂದು ಚಾರು ಮೇಲೆ ಮಲ್ಯ ನೇರವಾಗಿ ಹರಿಹಾಯ್ದಿದ್ದಾರೆ.
ತಮ್ಮ ಆಯ್ಕೆಯ ಪಾಕಿಸ್ತಾನದ ಮಿಸ್ಬಾ ಉಲ್ ಹಕ್ ಅವರನ್ನು ಆಡಿಸದಿದ್ದಕ್ಕಾಗಿ ಚಾರು ಶರ್ಮಾರನ್ನು ಮಲ್ಯ ಈಗಾಗಲೆ ಕಿತ್ತು ಹಾಕಿದ್ದಾರೆ. ಇದೇ ಕಾರಣಕ್ಕಾಗಿ ತಂಡದ ಕೋಚ್ ವೆಂಕಟೇಶ್ ಪ್ರಸಾದ್ ಅವರನ್ನೂ ಕಿತ್ತುಹಾಕಲಾಗಿತ್ತು. ಆದರೆ ಅವರು ಕೂಡಲೆ ಕ್ಷಮೆ ಕೇಳಿದ್ದರಿಂದ ಅವರನ್ನು ಉಳಿಸಿಕೊಂಡಿದ್ದಾರೆ. ತಂಡದ ಐಕಾನ್ ಆಟಗಾರನಾಗಿರುವುದರಿಂದ ದ್ರಾವಿಡ್ ಬಗ್ಗೆ ಇಲ್ಲಿಯವರೆಗೆ ಬಹಿರಂಗವಾಗಿ ಮಲ್ಯ ಹೇಳಿಕೆ ನೀಡಿರಲಿಲ್ಲ. ಈಗ ಚಾರು ಬದಲು ಮಾಜಿ ಟೆಸ್ಟ್ ಕ್ರಿಕೆಟ್ ಆಟಗಾರ ಬ್ರಿಜೇಶ್ ಪಟೇಲ್ ಅವರನ್ನು ಸಿಇಓ ಆಗಿ ಆಯ್ಕೆ ಮಾಡಿದ್ದಾರೆ.
(ಯುಎನ್ಐ)