ನಕಲಿ ಮತದಾನಕ್ಕೆ ಒಂದು ವರ್ಷ ಜೈಲು ಶಿಕ್ಷೆ
ಬೆಂಗಳೂರು,ಮೇ 9: ಚುನಾವಣೆಯಲ್ಲಿ ನಕಲಿ ಮತದಾನ ಮಾಡಿರುವುದು ಸಾಬೀತಾದಲ್ಲಿ ಒಂದು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಎಂ.ಎನ್.ವಿದ್ಯಾಶಂಕರ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಅನೇಕ ವರ್ಷಗಳಿಂದ ರಾಜ್ಯದ ವಿವಿಧೆಡೆ ಇಂತಹ ವ್ಯವಸ್ಥೆ ಜಾರಿಯಲ್ಲಿದೆ ಎನ್ನುವ ಆರೋಪಗಳು ಆಯೋಗದ ಗಮನಕ್ಕೆ ಬಂದಿದ್ದು, ಈ ಸಲ ಚುನಾವಣೆಯಲ್ಲಿ ಅವುಗಳನ್ನೆಲ್ಲ ತಡೆಗಟ್ಟಲು ಆಯೋಗ ಸರ್ವಸನ್ನದ್ಧವಾಗಿದೆ ಎಂದರು.
ನಕಲಿ ಮತದಾನ ಆರೋಪದಡಿ ಸಿಕ್ಕಿಬೀಳುವ ಆರೋಪಿಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಒಂದು ವರ್ಷ ಜೈಲು ಶಿಕ್ಷೆ ವಿಧಿಸಲು ಸಹ ಶಿಫಾರಸ್ಸು ಮಾಡಲಾಗುವುದು. ನಕಲಿ ಮತದಾನ, ಅಕ್ರಮ, ಅವ್ಯವಹಾರಗಳು ಕಂಡು ಬಂದಲ್ಲಿ 080-22219999 ಈ ದೂರವಾಣಿ ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಿ ಎಂದು ವಿದ್ಯಾಶಂಕರ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಅರೋಪದಡಿ ಪ್ರಕರಣಗಳು ದಾಖಲಾಗಿವೆ. ಸುಮಾರು 21.4 ಕೋಟಿ ರುಪಾಯಿ ಅಕ್ರಮ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರಮವೆಸಗಲು ಈ ಸಲ ಆಸ್ಪದ ನೀಡಿಲ್ಲ ಎಂದಿರುವ ಅವರು, ಚುನಾವಣೆ ಮುಗಿಯುವವರೆಗೂ ಇವುಗಳ ಕಡೆಗೆ ಹದ್ದಿನ ಕಣ್ಣಿಡಲಾಗುವುದು ಎಂದು ಹೇಳಿದ್ದಾರೆ.
ಮುಕ್ತ ಹಾಗೂ ನ್ಯಾಯಸಮ್ಮತ ಮತದಾನಕ್ಕೆ ಪೊಲೀಸ್ ಇಲಾಖೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಸೂಕ್ಷ್ಮ, ಅತೀ ಸೂಕ್ಷ್ಮ ಎಂದು ಗುರುತಿಸಲಾದ ಕ್ಷೇತ್ರಗಳಲ್ಲಿ ಅಗತ್ಯ ಸಿಬ್ಬಂದಿ ನಿಯೋಜನೆ ಮಾಡುವ ಕುರಿತು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ವಿದ್ಯಾಶಂಕರ ಹೇಳಿದರು. ಮತದಾನ ಎಲ್ಲರ ಹಕ್ಕು. ಎಲ್ಲರೂ ಶಾಂತಿಯುತವಾಗಿ ತಮ್ಮ ಮತ ಚಲಾಯಿಸುವ ಮೂಲಕ ಸಹಕರಿಸಬೇಕೆಂದು ಮನವಿ ಮಾಡಿಕೊಂಡರು.
(ದಟ್ಸ್ ಕನ್ನಡ ವಾರ್ತೆ)