ಗುಪ್ತಚರ ಇಲಾಖೆ ಸಮೀಕ್ಷೆಯಲ್ಲಿ 'ಕೈ' ಮೇಲು
ಬೆಂಗಳೂರು,ಮೇ 9: ಚುನಾವಣೆ ಪೂರ್ವದಲ್ಲಿ ನಡೆಯುತ್ತಿರುವ ಸಮೀಕ್ಷೆಗಳು ಜನತೆಯಲ್ಲಿ ಭಾರಿ ಕುತೂಹಲ ಮೂಡಿಸಿವೆ.ಇದೀಗ ಮತ್ತೊಂದು ಸುದ್ದಿ ಹೊರಬಿದ್ದಿದ್ದು, ರಾಜ್ಯ ವಿಧಾನಸಭೆಗೆ ಶನಿವಾರ ನಡೆಯಲಿರುವ ಪ್ರಥಮ ಹಂತದ ಮತದಾನದ 89 ಕ್ಷೇತ್ರಗಳ ಫಲಿತಾಂಶಕ್ಕೆ ಸಂಬಂಧಿಸಿದಂತೆ ಕೇಂದ್ರ ಗುಪ್ತಚರ ಇಲಾಖೆ ತನ್ನ ಎರಡನೆ ವರದಿಯಲ್ಲಿ ಕಾಂಗ್ರೆಸ್ ಅತ್ಯಧಿಕ ಸ್ಥಾನ ಗಳಿಸಲಿದೆ ಎಂದು ಅಂದಾಜಿಸಿ ವರದಿ ನೀಡಿದೆ.
ವರದಿಯ ಪ್ರಕಾರ ಕಾಂಗ್ರೆಸ್ 40 ಸ್ಥಾನ, ಜೆಡಿಎಸ್ 28 ಸ್ಥಾನ ಹಾಗೂ 18 ಸ್ಥಾನಗಳನ್ನು ಬಿಜೆಪಿ ಗಳಿಸಲಿದೆ ಎಂದು ಇಲಾಖೆಯ ಸಮೀಕ್ಷೆ ತಿಳಿಸುತ್ತದೆ. ಮೊದಲ ಹಂತದ ಚುನಾವಣೆಯ ಐದು ಕ್ಷೇತ್ರಗಳಲ್ಲಿ ಗೆಲ್ಲುವ ಐವರು ಅಭ್ಯರ್ಥಿಗಳನ್ನು ಗುರುತಿಸಲಾಗಿದ್ದು, ಅದರಲ್ಲಿ ಇಬ್ಬರು ಜೆಡಿಎಸ್, ಇಬ್ಬರು ಬಿಜೆಪಿ ಮತ್ತು ಒಬ್ಬರು ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆಂದು ವರದಿ ಸ್ಪಷ್ಟಪಡಿಸಿದೆ. ಅವು ಚಾಮರಾಜಪೇಟೆ, ನಾಗಮಂಗಲ(ಜೆಡಿಎಸ್) , ಪದ್ಮನಾಭನಗರ, ಹೊಸಕೋಟೆ(ಬಿಜೆಪಿ) ಹಾಗೂ ಗೋವಿಂದರಾಜ ನಗರ(ಕಾಂಗ್ರೆಸ್) ಕ್ಷೇತ್ರಗಳಾಗಿವೆ.
ಕಾಂಗ್ರೆಸ್ ಪಕ್ಷ ಮುನ್ನಡೆಯಲ್ಲಿರುವ 28 ಕ್ಷೇತ್ರಗಳನ್ನು ಇಲಾಖೆ ಗುರುತಿಸಿದೆ. ಮುಖ್ಯವಾಗಿ ವರುಣಾ, ಕನಕಪುರ, ಕೊರಟಗೆರೆ, ಮಂಡ್ಯ, ಜಯನಗರ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರಂ, ಗಾಂಧಿನಗರ, ಕೋಲಾರ, ಬಸವನಗುಡಿ, ಚನ್ನಪಟ್ಟಣ, ಗುಂಡ್ಲುಪೇಟೆ, ಯಶವಂತಪುರ, ಬ್ಯಾಟರಾಯನಪುರ, ಪಾವಗಡ, ಶಿರಾ, ಕುಣಿಗಲ್, ಶಿಡ್ಲಘಟ್ಟ, ಚಿಂತಾಮಣಿ ಕ್ಷೇತ್ರಗಳು ಸೇರಿವೆ.
ಹಾಗೆಯೇ ಬಿಜೆಪಿ ಮುನ್ನಡೆಯಿರುವ ಕ್ಷೇತ್ರಗಳೆಂದರೆ, ತುಮಕೂರು ನಗರ, ಗ್ರಾಮೀಣ, ಮಾಲೂರು, ಹೆಬ್ಬಾಳ, ರಾಜಾಜಿನಗರ, ಆನೇಕಲ್, ಬೆಂಗಳೂರು ದಕ್ಷಿಣ, ಸಕಲೇಶಪುರ, ಮೈಸೂರಿನ ಕೃಷ್ಣರಾಜಪುರ, ಎಚ್.ಡಿ.ಕೋಟೆ ಮತ್ತು ತಿಪಟೂರು ಕ್ಷೇತ್ರಗಳು ಸೇರಿವೆ.
ಗುಬ್ಬಿ, ಹಾಸನ, ಹೊಳೆನರಸೀಪುರ, ಮಾಗಡಿ, ಮಳವಳ್ಳಿ, ಮದ್ದೂರು,ಶ್ರೀನಿವಾಸಪುರ ಮತ್ತು ಕೆ.ಆರ್.ನಗರದಲ್ಲಿ ಜೆಡಿಎಸ್ ಮುನ್ನಡೆ ಸಾಧಿಸುವ ಕ್ಷೇತ್ರಗಳಾಗಿವೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನ ಮಮತಾ ನಿಚ್ಚಾನಿ ಸ್ಪರ್ಧಿಸಿರುವ ರಾಮನಗರದಲ್ಲಿ ಭಾರಿ ಪೈಪೋಟಿಯಿದೆ. ಶ್ರೀರಂಗಪಟ್ಟಣದಲ್ಲಿ ಚಿತ್ರನಟ ಅಂಬರೀಷ್ ಮತ್ತು ರೈತ ಸಂಘದ ಕೆ.ಎಸ್.ನಂಜುಂಡೇಗೌಡರ ನಡುವೆ ನಿಕಟ ಸ್ಪರ್ಧೆ ಏರ್ಪಡಲಿದೆ ಎಂದು ವರದಿ ತಿಳಿಸಿದೆ.
(ದಟ್ಸ್ ಕನ್ನಡ ವಾರ್ತೆ)