ವೆಂಕಯ್ಯನಾಯ್ಡುರ ತೆಲುಗು ಭಾಷಣಕ್ಕೆ ಕರವೇ ಖಂಡನೆ
ಬೆಂಗಳೂರು, ಏ.29: ಪಾವಗಡ ತಾಲೂಕಿನಲ್ಲಿ ಮತದಾರರನ್ನು ಓಲೈಸಲು ಬಿಜೆಪಿಯ ಮುಖಂಡ ವೆಂಕಯ್ಯ ನಾಯ್ಡು ತೆಲುಗಿನಲ್ಲಿ ಭಾಷಣ ಮಾಡಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸಿದೆ.
ಪಾವಗಡದ ಬಿಜೆಪಿ ಪ್ರಚಾರ ಸಭೆಯಲ್ಲಿ ಭಾಗವಹಿಸಿದ ವೆಂಕಯ್ಯನಾಯ್ಡು ತೆಲುಗಿನಲ್ಲಿ ಭಾಷಣ ಮಾಡಿದ್ದಾರೆ. ಈ ಕುರಿತಂತೆ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಯಾವುದೇ ಪಕ್ಷ ಅನ್ಯ ಭಾಷೆಗಳಲ್ಲಿ ಪ್ರಚಾರ ಮಾಡಿದರೆ ಅದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಯಾರೇ ಆಗಲಿ ಕನ್ನಡದಲ್ಲಿ ಪ್ರಚಾರ ಮಾಡಬೇಕು. ಅನ್ಯ ಭಾಷೆಗಳಲ್ಲಿ ಪ್ರಚಾರ ಮಾಡಿದರೆ ಅಂತಹ ನಾಯಕರಿಗೆ ಘೇರಾವ್ ಮಾಡಲಾಗುವುದು. ಅಂತಹವರ ಪ್ರಚಾರ ಸಭೆಗೆ ನುಗ್ಗಿ ದಾಂಧಲೆ ಮಾಡುವುದಾಗಿ ನಾರಾಯಣಗೌಡ ತಿಳಿಸಿದರು.
ಕರ್ನಾಟಕದಿಂದ ಎರಡು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿರುವ ವೆಂಕಯ್ಯನಾಯ್ಡು ಅವರಿಗೆ ಕನ್ನಡ ಭಾಷೆ ಕಲಿಯಬೇಕು ಎಂಬ ಕಾಳಜಿ ಇಲ್ಲ. ಕನ್ನಡ ನಾಡು ನುಡಿಯ ಬಗ್ಗೆ ಇವರಿಗೆ ಕಿಂಚಿತ್ತೂ ಅಭಿಮಾನವಿಲ್ಲ. ಕನ್ನಡಕ್ಕೆ ಶಾಸ್ತ್ತ್ರೀಯ ಸ್ಥಾನಮಾನದ ಬಗ್ಗೆ ವೆಂಕಯ್ಯನಾಯ್ಡು ಇದುವರೆಗೂ ತುಟಿ ಬಿಚ್ಚಿಲ್ಲ. ಇಂತಹವರಿಗೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಬೇಕು ಎಂದು ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆಯೇ ತೆಲುಗು,ತಮಿಳು ಸೇರಿದಂತೆ ಅನ್ಯಭಾಷೆಗಳಲ್ಲಿ ಭಾಷಣ ಮಾಡುವ ರಾಜಕಾರಣಿಗಳ ವಿರುದ್ಧ ಹೋರಾಡಲು ಅವರು ನಿರ್ಧರಿಸಿದ್ದಾರೆ.
(ದಟ್ಸ್ಕನ್ನಡ ವಾರ್ತೆ)