ದೇವೇಗೌಡರ ಖಾಸಗಿ ಆಸೆ ಮಸಾಲೆದೋಸೆ
ಮಾನ್ಯರೆ,
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ನೀಡುತ್ತಿರುವ ಭರವಸೆಗಳ ಪಟ್ಟಿ ತುಂಬಾ ಆಕರ್ಷಕವೂ ಕೆಲವೆಡೆ ಕರ್ಕಶವಾಗಿಯೂ ಕೇಳಿಸುತ್ತಿದೆ. ರಾಜಕೀಯ ಕ್ಷೇತ್ರದಲ್ಲಿ ಅಲ್ಪ ಸ್ವಲ್ಪ ಸಭ್ಯತೆ ಇದ್ದ ದಿನಗಳಲ್ಲಿ ಸಾಮಾನ್ಯವಾಗಿ ಚುನಾವಣಾ ಆಶ್ವಾಸನೆಗಳು ಜನಪರವಾಗಿರುತ್ತಿದ್ದವು. ಈಡೇರುತ್ತಿದ್ದವೋ ಅಥವಾ ಇಲ್ಲವೋ ಕಡೆಯಪಕ್ಷ ಭರವಸೆಗಳು ಬಡತನ ನಿರ್ಮೂಲನೆ, ಶೈಕ್ಷಣಿಕ ಸುಧಾರಣೆ, ಮೂಲಭೂತ ಸೌಕರ್ಯ ನಿರ್ಮಾಣ, ಸಾಮಾಜಿಕ ಅಸಮತೋನಲೆಗಳ ನಿವಾರಣೆ ಮುಂತಾಗಿರುತ್ತಿದ್ದವು.
ಆದರೆ, ಪ್ರಸಕ್ತ ಚುನಾವಣೆಗಳಲ್ಲಿ ನಮ್ಮ ರಾಜಕಾರಣಿಗಳು ನೀಡುತ್ತಿರುವ ಆಶ್ವಾಸನೆಗಳು ಅಸಹ್ಯ ಹುಟ್ಟಿಸುತ್ತಿವೆ. ಎಲ್ಲರೂ ಕಲರ್ ಟಿವಿ ಕೊಡ್ತೀವಿ, ಕಡಿಮೆ ಬೆಲೆಗೆ ಅಕ್ಕಿ ಕೊಡ್ತೀವಿ, ನಿರುದ್ಯೋಗ ಭತ್ಯೆ ಕೊಡ್ತೀವಿ ಎಂದು ಹೇಳುತ್ತಿರುವುದು ಸುಶಿಕ್ಷಿತ ಸಮಾಜಕ್ಕೆ ಅವಮಾನ ಮಾಡಿದಂತಾಗುತ್ತಿದೆ. ನಮ್ಮ ದೇಶದಲ್ಲಿ ಬಡವರು, ಅವಿದ್ಯಾವಂತರು ಹೆಚ್ಚು ನಿಜ. ಆದರೆ ಮತದ ಆಸೆಗಾಗಿ ಅವರಿಗೆ ಈ ರೀತಿಯ ಆಸೆ ತೋರಿಸಿ ಮತ ಕಬಳಿಸುವ ಹುನ್ನಾರಕ್ಕೆ ನನ್ನ ಧಿಕ್ಕಾರವಿದೆ.
ಜೆಡಿಎಸ್ ಪಕ್ಷದ ದೇವೇಗೌಡರ ತುಂಬಾ ಖಾಸಗಿಯಾದ ಒಂದು ಪ್ರಣಾಳಿಕೆ ಓದಿ ನಗಬೇಕೋ ಅಳಬೇಕೋ ತಿಳಿಯದಾಗಿದೆ. ಕಳೆದ ಬಾರಿ ತಮ್ಮ ಮಗ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ ತಾವು ಆ ಕಾರ್ಯಕ್ರಮ ನೋಡುವುದಕ್ಕೆ ಸಾಧ್ಯವಾಗಲಿಲ್ಲವೆಂದು ( ಅನಾರೋಗ್ಯದ ಕಾರಣ) ಎಂದು ಹೇಳಿದ್ದಾರೆ. ಆದ್ದರಿಂದ ಆ ಕಾರ್ಯಕ್ರಮವನ್ನು ನೋಡುವ ಆಸೆ ಇದೆಯೆಂದೂ, ಅದಕ್ಕಾಗಿ ಅವರ ಮಗನನ್ನು ರಾಜ್ಯದ ಜನತೆ ಆರಿಸಿ ಕಳಿಸಬೇಕೆಂದೂ ಕೇಳಿಕೊಂಡಿದ್ದಾರೆ.
ತಮ್ಮ ಪುತ್ರ ವಿಧಾನಸಭೆಯಲ್ಲಿ ರಾರಾಜಿಸುವುದನ್ನು ನೋಡುವುದಕ್ಕೆ ಮತದಾರರು ಕುಮಾರಸ್ವಾಮಿಯನ್ನು ಚುನಾಯಿಸಬೇಕೋ ? ಅಥವಾ ಈ ರಾಜ್ಯದ 5 ಕೋಟಿ ಜನತೆಯ ಆಶೋತ್ತರಗಳನ್ನು, ಆರೋಗ್ಯವನ್ನು, ಐಶ್ವರ್ಯವನ್ನು, ಶಾಂತಿಯನ್ನು ಕಾಪಾಡಲು ಚುನಾಯಿಸಬೇಕೋ ? ಈ ರೀತಿಯ ವೈಯಕ್ತಿಯ ತೆವಲುಗಳ ಪ್ರಣಾಳಿಕೆಗಳನ್ನು, ಭಾವನಾತ್ಮಕ, ಕೌಟುಂಬಿಕ ಆಸೆಗಳನ್ನು ಯಾವುದೇ ಸಂಕೋಚವಿಲ್ಲದೆ ಪ್ರಕಟಪಡಿಸುವ ಅನಾಗರಿಕ ಸಮಾಜ ನಮ್ಮದಾಗಿದೆ. ವ್ಯಥೆಯಾಗುತ್ತಿದೆ.
ಡಾ. ಮೀರಾ ಮಂಜುನಾಥ್, ಬಿಡದಿ.












Click it and Unblock the Notifications