ಸುಳ್ಯ, ಪುತ್ತೂರಿನಲ್ಲಿ ಚಿಕೂನ್ ಗುನ್ಯಾ ಭೀತಿ
ಮಂಗಳೂರು, ಏ.16: ಸುಳ್ಯ ಹಾಗೂ ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುಮಾರು 500 ಕ್ಕೂ ಹೆಚ್ಚು ಚಿಕುನ್ ಗುನ್ಯಾ ಪೀಡಿತ ಪ್ರಕರಣಗಳು ಕಂಡು ಬಂದಿದ್ದು, ಜನತೆ ಆತಂಕಕ್ಕೆ ಈಡಾಗಿದ್ದಾರೆ. ಸ್ಥಳೀಯ ಆರೋಗ್ಯ ಕೇಂದ್ರಗಳು ಚಿಕಿತ್ಸೆ ನೀಡಲು ವಿಫಲವಾಗಿದ್ದು, ದಿನೇ ದಿನೇ ಕಾಯಿಲೆ ಇತರ ಪ್ರದೇಶಗಳಿಗೂ ಹಬ್ಬುತ್ತಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವಿಭಾಗದ ವರದಿ ಪ್ರಕಾರ, ಸುಳ್ಯ ಹಾಗೂ ಪುತ್ತೂರು ತಾಲೂಕು ಕೇಂದ್ರಗಳಲ್ಲೇ 530 ಕ್ಕೂ ಹೆಚ್ಚಿನ ಪ್ರಕರಣಗಳು ಕಂಡುಬಂದಿದ್ದು, ಸುಮಾರು 1,787 ಜನರು ಅತೀವ ಜ್ವರ ಪೀಡಿತರಾಗಿ ಹಾಸಿಗೆ ಹಿಡಿದಿದ್ದಾರೆ. ಆದರೆ ರೋಗಿಗಳ ನಿರ್ವಹಣೆಗೆ ಜಿಲ್ಲಾ ಆರೋಗ್ಯ ಕೇಂದ್ರಗಳು ಯಾವುದೇ ತಯಾರಿ ಇಲ್ಲದೆ, ಸೂಕ್ತ ಚಿಕಿತ್ಸೆ ಕೊಡುವಲ್ಲಿ ವಿಫಲವಾಗಿವೆ ಎಂದು ನಾಗರೀಕರು ದೂರಿದ್ದಾರೆ.
ಶೀಘ್ರದಲ್ಲೇ 100 ಕ್ಕೂ ಹೆಚ್ಚು ಚಿಕುನ್ ಗುನ್ಯಾ ಪರೀಕ್ಷಾ ಕಿಟ್ ಗಳನ್ನು ರೋಗ ಶಂಕಿತ ಪ್ರದೇಶಗಳಿಗೆ ಕಳಿಸಲಾಗುವುದು. 3 ಸಂಚಾರಿ ವೈದ್ಯಕೀಯ ತಂಡಗಳನ್ನು ಈ ತಾಲೂಕುಗಳಿಗೆ ಕಳಿಸಲಾಗುವುದು. ಸಾರ್ವಜನಿಕರಲ್ಲಿ ಕಾಯಿಲೆ ಬಗ್ಗೆ ಮುನ್ನೆಚ್ಚರಿಕೆ ನೀಡಲು ನೋಡಲ್ ಕೇಂದ್ರಗಳನ್ನು ತೆರೆಯಲಾಗಿದ್ದು, ಕಾಯಿಲೆ ಹರಡದಂತೆ ತಡಗಟ್ಟಲಾಗುತ್ತದೆ ಎಂದು ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಡಾ. ಜಗನ್ನಾಥ್ ಹೇಳಿದ್ದಾರೆ.
(ದಟ್ಸ್ ಕನ್ನಡವಾರ್ತೆ)