ಒಲಂಪಿಕ್ ಜ್ಯೋತಿ ಸ್ವಾಗತಕ್ಕೆ ನವದೆಹಲಿ ಸಜ್ಜು
ನವದೆಹಲಿ,ಏ.16: ಬೀಜಿಂಗ್ ಒಲಂಪಿಕ್ ಕ್ರೀಡಾ ಜ್ಯೋತಿ ಗುರುವಾರ ಭಾರತಕ್ಕೆ ಆಗಮಿಸಲಿರುವ ಹಿನ್ನಲೆಯಲ್ಲಿ ಸೂಕ್ತ ಬಿಗಿ ಭದ್ರತೆ ನೀಡಲು ನಿರ್ಧರಿಸಲಾಗಿದೆ. ಟಿಬೆಟ್ ಯನ್ನರಿಂದ ಉಗ್ರವಾದ ಪ್ರತಿಭಟನೆ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಅರೆಸೇನಾಪಡೆ ಸೇರಿದಂತೆ ಭಾರಿ ಪೊಲೀಸ್ ಬಂದೋಬಸ್ತ್ ನ್ನು ನಿಯೋಜಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಒಲಂಪಿಕ್ ಕ್ರೀಡಾ ಜ್ಯೋತಿ ನಾಳೆ ಇಸ್ಲಾಮಾಬಾದ್ ನಿಂದ ಭಾರತಕ್ಕೆ ಆಗಮಿಸಲಿದೆ. ರಾಜಧಾನಿ ನವದೆಹಲಿಯ ಇಂಡಿಯಾ ಗೇಟ್ ನಲ್ಲಿ ಅದನ್ನು ಬರ ಮಾಡಿಕೊಳ್ಳಲಾಗುವುದು. ಜ್ಯೋತಿಯಾತ್ರೆ ಜತೆಗೆ 30 ಮಂದಿ ಆಗಮಿಸುತ್ತಿದ್ದು, ಅವರಿಗೆ ಸೂಕ್ತ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಗೃಹ ಸಚಿವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಜ್ಯೋತಿಯಾತ್ರೆ ನಿರಾತಂಕವಾಗಿ ನಡೆಯಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಜ್ಯೋತಿಯಾತ್ರೆಯ ರಿಲೇ ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ ವರೆಗೆ ನಡೆಸಲಾಗುವುದು.ಭದ್ರತೆ ದೃಷ್ಟಿಯಿಂದ ಜ್ಯೋತಿಯಾತ್ರೆ ಅಂತರವನ್ನು ಕಡಿಮೆ ಮಾಡಲಾಗಿದೆ. ಜ್ಯೋತಿಯಾತ್ರೆ ಜತೆಗೆ ಅರೆಸೇನಾಪಡೆಯ ಕಮಾಂಡೋಗಳು ಕೂಡಾ ರಿಲೇಯಲ್ಲಿ ಭಾಗವಹಿಸಲಿದ್ದಾರೆ. ಶಾಂತಿ ಮತ್ತು ಸೌಹಾರ್ಧತೆಗಾಗಿ ಈ ಜ್ಯೋತಿಯಾತ್ರೆಯನ್ನು ಕೈಗೊಳ್ಳಲಾಗಿದೆ. ಈ ಯಾತ್ರೆಯಲ್ಲಿ 5000 ಮಕ್ಕಳು ಪಾಲ್ಗೊಳ್ಳಲಿದ್ದಾರೆ.ರಿಲೇಯ ಸುತ್ತಲೂ ಮೂರು ಸುತ್ತಿನ ಪೋಲಿಸ್ ಭದ್ರತೆಯನ್ನು ಒದಗಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏ.17ರಂದು ಕ್ರೀಡಾ ಜ್ಯೋತಿಯಾತ್ರೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಟಿಬೆಟಿಯನ್ನರ ಪ್ರತಿಭಟನೆ ತೀವ್ರಗೊಂಡಿದೆ. ಇಂದು ಟಿಬೆಟಿಯನ್ನರು ಚೀನಾ ರಾಯಬಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಚೀನಾದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಟಿಬೆಟಿಯನ್ನರನ್ನು ಹತ್ಯೆ ಮಾಡುವುದನ್ನು ಚೀನಾ ನಿಲ್ಲಿಸಬೇಕು ಹಾಗೂ ಬೀಜಿಂಗ್ ನಲ್ಲಿ ನಡೆಸಲು ಉದ್ದೇಶಿಸಿರುವ ಒಲಂಪಿಕ್ ಕ್ರೀಡಾಕೂಟವನ್ನು ರದ್ದುಗೊಳಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
(ದಟ್ಸ್ ಕನ್ನಡ ಕ್ರೀಡಾವಾರ್ತೆ)
ಪೂರಕ ಓದಿಗೆ:
ಹಸಿದ ಡ್ರಾಗನ್,ಅಹಿಂಸೆಯ ದಲೈಲಾಮ
ಓದುಗರ ಓಲೆ : ಟಿಬೆಟ್ ಬೆಟ್ಟದಲ್ಲಿ ಚೀನಾ ಅಟ್ಟಹಾಸ












Click it and Unblock the Notifications