ಅಭ್ಯರ್ಥಿ ಪಟ್ಟಿ ಹಿಡಿದು ದೆಹಲಿಗೆ ಯಡಿಯೂರಪ್ಪ ದೌಡು
ಬೆಂಗಳೂರು, ಮಾ.19: ಅಭ್ಯರ್ಥಿಗಳ ಆಯ್ಕೆ ಸಂಬಂಧ ಪಕ್ಷದ ವರಿಷ್ಠರ ಜೊತೆ ಸಮಾಲೋಚಿಸಲು ರಾಜ್ಯ ಬಿಜೆಪಿ ಅಧ್ಯಕ್ಷ ಸದಾನಂದ ಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬುಧವಾರ ದೆಹಲಿಗೆ ದೌಡಾಯಿಸಿದರು.
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗಳು ಮೇ ತಿಂಗಳಲ್ಲಿ ನಡೆಯುವುದು ಖಚಿತವಾಗುತ್ತಿದ್ದಂತೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಜಿಲ್ಲಾ ಮುಖಂಡರ ಜೊತೆ ಈಗಾಗಲೆ ಚರ್ಚೆ ನಡೆಸಿದ್ದರು. ಈ ಸಭೆಯ ಒಟ್ಟಾರೆ ಅಭಿಪ್ರಾಯವನ್ನು ವರಿಷ್ಠರ ಗಮನಕ್ಕೆ ತಂದು ಸಂಭವನೀಯ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗುವುದು ಎಂದು ಬಿಜೆಪಿಯ ವಕ್ತಾರ ಸುರೇಶ್ ಕುಮಾರ್ ತಿಳಿಸಿದರು.
ರಾಜ್ಯ ಬಿಜಿಪಿ ಉಸ್ತುವಾರಿ ನೋಡಿಕೊಳ್ಳಲು ಹೊಸದಾಗಿ ನೇಮಕವಾಗಿರುವ ಪಕ್ಷದ ಹಿರಿಯ ಮುಖಂಡ ಅರುಣ್ ಜೇಟ್ಲಿ, ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಹಾಗೂ ಎಲ್.ಕೆ.ಆಡ್ವಾನಿ ಅವರನ್ನು ಯಡಿಯೂಪ್ಪ ಹಾಗೂ ಸದಾನಂದ ಗೌಡ ಭೇಟಿಯಾಗಲಿದ್ದಾರೆ. ಬಿಜೆಪಿ ನಾಯಕರಿಗೆ ರಾಜ್ಯದ ಸ್ಥಿತಿಗತಿಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಿದ್ದಾರೆ. ಸಂಸದ ಅನಂತಕುಮಾರ್ ಸಹ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ರಾಜ್ಯ ಬಿಜೆಪಿ ಉಸ್ತುವಾರಿ ನೋಡಿಕೊಳ್ಳಲು ಹೊಸದಾಗಿ ನೇಮಕವಾಗಿರುವ ಅರುಣ್ ಜೇಟ್ಲಿ ಗುರುವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ಜೇಟ್ಲಿ ಅವರು ಎರಡು ದಿನಗಳ ಕಾಲ ರಾಜ್ಯದಲ್ಲಿ ಇದ್ದು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಲಿದ್ದಾರೆ.
(ದಟ್ಸ್ಕನ್ನಡ ವಾರ್ತೆ)