ಸರಬ್ಜಿತ್ ಕ್ಷಮಾದಾನ ಮನವಿಗೆ ಪುರಸ್ಕಾರ ಸಂಭವ
ಇಸ್ಲಾಮಾಬಾದ್, ಮಾ.19 : 1990ರ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ಗೆ 'ಮಾನವೀಯತೆ'ಯ ಆಧಾರದ ಮೇಲೆ ಕ್ಷಮಾದಾನ ಸಿಗುವ ಸಾಧ್ಯತೆಯಿದೆ.
ಲಾಹೋರ್ ಮತ್ತು ಮುಲ್ತಾನ್ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬಂಧಿಯಾಗಿರುವ ಸರಬ್ಜಿತ್ಗೆ ಕ್ಷಮಾದಾನ ನೀಡಬೇಕೆಂದು ಭಾರತ ಸರ್ಕಾರ ಕೋರಿದ್ದ ಮನವಿಯನ್ನು ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಷ್ರಫ್ ಪರಿಗಣಿಸಬಹುದೆಂದು ಪಾಕಿಸ್ತಾನದ ವಿದೇಶಿ ಕಚೇರಿಯ ಮೂಲಗಳಿಂದ ತಿಳಿದುಬಂದಿದೆ.
ಈ ಸರಣಿ ಸ್ಫೋಟದಲ್ಲಿ 14 ಜನ ಹತರಾಗಿದ್ದರು. ಈ ಸಂಬಂಧ ಸರಬ್ಜಿತ್ಗೆ ನೀಡಲಾಗಿದ್ದ ಗಲ್ಲು ಶಿಕ್ಷೆ ನೀಡಬಾರದೆಂಬ ಮನವಿಯನ್ನು 2006ರಲ್ಲಿ ಪಾಕ್ ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಕೊನೆಯ ಆಶಾಕಿರಣವಾಗಿದ್ದ ಪಾಕ್ ಅಧ್ಯಕ್ಷ ಪರ್ವೇಜ್ ಮುಷ್ರಫ್ ಕೂಡ ಕ್ಷಮಾದಾನ ಕೋರಿಕೆಯನ್ನು ಇದೇ ಮಾರ್ಚ್ 3ರಂದು ನಿರಾಕರಿಸಿದ್ದರು.
ಸರಬ್ಜಿತ್ರನ್ನು ಏಪ್ರಿಲ್ 1ರಂದು ಗಲ್ಲಿಗೇರಿಸಬೇಕೆಂದು ನಿಗದಿಯಾಗಿತ್ತು. ಗಲ್ಲುಶಿಕ್ಷೆಯ ದಿನಾಂಕವನ್ನು ಏಪ್ರಿಲ್ 1ರ ಬದಲು ಏಪ್ರಿಲ್ 30ಕ್ಕೆ ಮುಂದೂಡಲಾಗಿದೆಯಾದರೂ ಭಾರತದ ಕೋರಿಕೆಯನ್ನು ಮನ್ನಿಸಿ ಮುಷ್ರಫ್ ಕ್ಷಮಾದಾನ ನೀಡಬಹುದೆಂದು ಹೇಳಲಾಗುತ್ತಿದೆ.
ಪಾಕಿಸ್ತಾನ ಸರ್ಕಾರ ಸರಬ್ಜಿತ್ರನ್ನು ಭಯೋತ್ಪಾದಕ ಎಂದು ಪರಿಗಣಿಸಿದೆ. ಮನಜಿತ್ ಸಿಂಗ್ ಹೆಸರು ಸೇರಿದಂತೆ ಅನೇಕ ಹೆಸರುಗಳಲ್ಲಿ ಭಯೋತ್ಪಾದನೆ ಬಿತ್ತಿದ್ದಾನೆಂದು ಆರೋಪಿಸಿದೆ. ಆದರೆ, ಸರಬ್ಜಿತ್ನನ್ನು ಭಯೋತ್ಪಾದಕ ಎಂದು ತಪ್ಪಾಗಿ ಅರ್ಥೈಸಲಾಗಿದೆ, ಆತ ನಿರಪರಾಧಿಯಾಗಿದ್ದಾನೆ ಎಂದು ಸರಬ್ಜಿತ್ ಕುಟುಂಬ ಅಲವತ್ತುಕೊಂಡಿದೆ. ಸರಬ್ಜಿತ್ ಮಗಳು ಕೂಡ ತನ್ನ ಅಪ್ಪನನ್ನು ಬಿಡುಗಡೆ ಮಾಡಬೇಕೆಂದು ಟಿವಿ ಚಾನಲ್ನ ಮುಖಾಂತರ ಮನವಿ ಮಾಡಿಕೊಂಡಿದ್ದಳು.
(ಯುಎನ್ಐ)