20 ಮಂದಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ
ಬೆಂಗಳೂರು, ಮಾ.19: ಖ್ಯಾತ ನಾಟಕಕಾರ ಪ್ರೊ.ಕೆ.ಎಸ್.ಭಗವಾನ್ ಸೇರಿದಂತೆ ಒಟ್ಟು 20 ಮಂದಿ ಹಾಗೂ ಒಂದು ನಾಟಕ ಕಂಪನಿಗೆ ಕರ್ನಾಟಕ ನಾಟಕ ಅಕಾಡೆಮಿ 2007ನೇ ಸಾಲಿನ ಪ್ರಶಸ್ತಿಗಳನ್ನು ಮಂಗಳವಾರ ಪ್ರಕಟಿಸಿದೆ.
ಸದಾಶಿವ ಬ್ರಹ್ಮಾವರ್, ರಾಜಮ್ಮ ಹೆಗಡೆ, ಚಿಂದೋಡಿ ಶಂಭುಲಿಂಗಪ್ಪ, ರಾಜೇಂದ್ರ ಕಾರಂತ ಸೇರಿದಂತೆ 15 ಮಂದಿಗೆ ವಾರ್ಷಿಕ ಪ್ರಶಸ್ತಿ, ಸುಜಾತ ಜಂಗಮ ಶೆಟ್ಟಿ, ಶ್ರೀಪಾದ ಭಟ್ ಸೇರಿ ನಾಲ್ವರಿಗೆ ಯುವರಂಗ ಪುರಸ್ಕಾರ. ಗದಗದ ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘಕ್ಕೆ ಕೆ.ಹಿರಣ್ಣಯ್ಯ ಪ್ರಶಸ್ತಿ, ಪ್ರೊ.ಕೆ.ಎಸ್.ಭಗವಾನ್ ಅವರಿಗೆ ನಾಟಕ ಅಕಾಡೆಮಿಯ ಗೌರವ ಪ್ರಶಸ್ತಿ ದೊರಕಿದೆ.
ಮಾ.27ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ವಿಶ್ವ ರಂಗಭೂಮಿ ದಿನಾಚರಣೆಯಂದು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ ಶ್ರೀನಿವಾಸ್ ಜಿ.ಕಪ್ಪ್ಪಣ್ಣ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪ್ರಶಸ್ತಿಗಳನ್ನು ಖ್ಯಾತ ನಾಟಕಕಾರ ಏಣಗಿ ಬಾಳಪ್ಪ ಪ್ರದಾನ ಮಾಡಲಿದ್ದಾರೆ. ಗೌರವ ಪ್ರಶಸ್ತಿಯು 10 ಸಾವಿರ ರೂ. ನಗದು, ವಾರ್ಷಿಕ ಪ್ರಶಸ್ತಿಯು 5 ಸಾವಿರ ರೂ. ನಗದು, ಯುವರಂಗ ಪುರಸ್ಕಾರ 3 ಸಾವಿರ ರೂ. ನಗದು ಬಹುಮಾನವನ್ನು ಒಳಗೊಂಡಿದೆ.
ಸಹಾಯಧನಕ್ಕಾಗಿ ಆಯ್ಕೆಯಾಗಿರುವ ನಾಟಕ ಕಂಪನಿಗಳು:
ರಂಗಭೂಮಿ ಪುನಶ್ಚೇತನಕ್ಕೆ 25 ವರ್ಷ ಸೇವೆ ಸಲ್ಲಿಸಿದ ಕೆ.ಬಿ.ಆರ್.ಡ್ರಾಮ ಕಂಪನಿಯ ಚಿಂದೋಡಿ ಲೀಲಾ, ಚಿತ್ತರಗಿಯ ಕುಮಾರ ವಿಜಯ ನಾಟಕ ಸಂಘದ ಕೆ.ಬಿ.ರೇಣುಕಾ, ಗದಗದ ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘದ ಬಾಬು ಸಾಲಹಳ್ಳಿ, ಗುಡಿಗೇರಿಯ ಬಸವರಾಜು, ಬಿ.ಕುಮಾರಸ್ವಾಮಿ ಹಾಗೂ ಎಲ್.ಬಿ.ಶೇಖ್ ಅವರಿಗೆ ತಲಾ 3ಲಕ್ಷ ರೂ. ನೀಡಲಾಗುವುದು ಎಂದು ಕಪ್ಪಣ್ಣ ತಿಳಿಸಿದರು.
15 ವರ್ಷಕ್ಕಿಂತಲೂ ಹೆಚ್ಚು ಸೇವೆ ಸಲ್ಲಿಸಿರುವ ಕಂಪನಿಗಳು-ಶ್ರೀ ನಂದಿಕೇಶ್ವರ ನಾಟ್ಯ ಸಂಘ, ಶ್ರೀ ಗುರು ವಿಶ್ವಾರಾಧ್ಯ ನಾಟ್ಯ ಸಂಘ, ವಿಶ್ವಜ್ಯೋತಿ ಶ್ರೀ ಪಂಚಾಕ್ಷರ ನಾಟ್ಯ ಸಂಘ ಹಾಗೂ ಶ್ರೀ ಗುರು ತೋಂಟದಾರ್ಯ ನಾಟ್ಯ ಸಂಘಕ್ಕೆ ತಲಾ 2ಲಕ್ಷ ರೂ. ನೀಡಲಾಗುವುದು. 5 ವರ್ಷ ಸೇವೆ ಸಲ್ಲಿಸಿರುವ ತಾಳಿ ಕೋಟೆಯ ಖಾಶಕೇಶ್ವರ ನಾಟ್ಯ ಸಂಘ, ರಾಜಾಜಿನಗರದ ಕಲಾಬೈಭವ ಸಂಘ, ಅಕ್ಕಲ ಕೋಟೆಯ ಸಮರ್ಥ ನಾಟ್ಯ ಸಂಘಕ್ಕೆ ತಲಾ 1ಲಕ್ಷ ರೂ. ನೀಡಲಾಗುತ್ತದೆ.
(ದಟ್ಸ್ಕನ್ನಡ ವಾರ್ತೆ)












Click it and Unblock the Notifications