ಬೆಂಕಿ ಹಚ್ಚಿಕೊಂಡು ಬಿಎಸ್ಎನ್ಎಲ್ ಅಧಿಕಾರಿ ಆತ್ಮಹತ್ಯೆ
ಮೈಸೂರು, ಮಾ.19 : ಭಾರತ ಸಂಚಾರ್ ನಿಗಮ ನಿಯಮಿತದಲ್ಲಿ ಪ್ರಧಾನ ವ್ಯವಸ್ಥಾಪಕರಾಗಿದ್ದ ಗೋಪಿನಾಥ್ (55) ಎಂಬುವವರು ಬೆಂಕಿ ಹಚ್ಚಿಕೊಂಡು ಬೋಗಾದಿಯಲ್ಲಿರುವ ತಮ್ಮ ಮನೆಯಲ್ಲಿ ಕಳೆದ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮನೆಯಲ್ಲಿ ಯಾರೂ ಇಲ್ಲದಂಥ ಸಮಯದಲ್ಲಿ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲ.
ಮೈಸೂರಿನ ಬಿಎಸ್ಎನ್ಎಲ್ನಲ್ಲಿ ಪ್ರಧಾನ ವ್ಯವಸ್ಥಾಪಕರಾಗಿದ್ದ ಅವರನ್ನು ಇತ್ತೀಚೆಗೆ ಮೇಘಾಲಯದ ಇಂಪಾಲಾಗೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಅನಾರೋಗ್ಯದ ಕಾರಣ ಎರಡೇ ತಿಂಗಳಲ್ಲಿ ಮೈಸೂರಿಗೆ ವಾಪಸಾಗಿದ್ದರು. ಕೆಲ ದಿನಗಳ ಹಿಂದೆ ಇಂಪಾಲಾಗೆ ಮತ್ತೆ ವರ್ಗಾವಣೆಯಾಗಿತ್ತು.
ಅವರ ಹೆಂಡತಿ ಗೀತಾ ಮನೆಗೆ ಮರಳಿದಾಗ ಅವರು ಸುಟ್ಟಗಾಯಗಳಿಂದ ಒದ್ದಾಡುತ್ತಿದ್ದರು. ಮನೆ ಒಳಗಡೆಯಿಂದ ಅಗುಳಿ ಹಾಕಿತ್ತು. ನೆರೆಹೊರೆಯವರೊಡನೆ ಮನೆ ಬಾಗಿಲು ಮುರಿದು ಒಳ ಹೋಗುವಷ್ಟರಲ್ಲಿ ಗೋಪಿನಾಥ್ ಅವರು ಅಸುನೀಗಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
(ಯುಎನ್ಐ)