ರಾಜ್ಯದ ಎಲ್ಲೆಡೆ ಹಿರಿಯ ನಾಗರಿಕರ ಸಹಾಯವಾಣಿ
ಬೆಂಗಳೂರು, ಮಾ.3: ಹಿರಿಯ ನಾಗರಿಕರಿಗೆ ನೆರವಾಗುವ ಉದ್ದೇಶದಿಂದ ವಿಕಲಚೇತನ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ರಾಜ್ಯದ 14 ಕಡೆ ಆರಂಭಿಸಿದ ಸಹಾಯವಾಣಿ (ಉಚಿತ ದೂರವಾಣಿ ಸಂಖ್ಯೆ 1090)ಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಈ ರೀತಿಯ ಸಹಾಯವಾಣಿಯನ್ನು ರಾಜ್ಯದ ಎಲ್ಲೆಡೆ ವಿಸ್ತರಿಸಲಾಗುವುದು ಎಂದು ವಿಕಲಚೇತನ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ನಿರ್ದೇಶಕ ವೇದಮೂರ್ತಿ ತಿಳಿಸಿದರು.
ಬೆಂಗಳೂರಿನ ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ಏರ್ಪಡಿಸಲಾಗಿದ್ದ ಹೈದರಾಬಾದ್ ಮೂಲದ ಗೋಲ್ಡೇಜ್ ಆಶ್ರಮ ಮತ್ತು ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಈ ವಿಷಯ ತಿಳಿಸಿದರು. ತಮ್ಮ ದೂರುಗಳನ್ನು ಹಿರಿಯ ನಾಗರಿಕರು ಸಹಾಯವಾಣಿ ಮೂಲಕ ಸಲ್ಲಿಸಿ ಅಗತ್ಯ ಸಲಹೆ ಪಡೆಯುತ್ತಿದ್ದಾರೆ ಎಂದು ವೇದಮೂರ್ತಿ ಹೇಳಿದರು.
ರಾಜ್ಯದ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಬೆಂಗಳೂರು ಹಾಗೂ ಗುಲ್ಬರ್ಗ ಜಿಲ್ಲೆಗಳಲ್ಲಿರುವ ವಯೋವೃದ್ಧರ ಕೇಂದ್ರಗಳನ್ನು ಸಹ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಸಹಯೋಗದೊಂದಿಗೆ ಒಟ್ಟು 80 ವೃದ್ಧಾಶ್ರಮಗಳನ್ನು ರಾಜ್ಯದಲ್ಲಿ ನಡೆಸಲಾಗುತ್ತಿದೆ. 283 ಕೋಟಿ ರೂ.ಗಳನ್ನು ವೃದ್ಧರ ಮಾಸಿಕ ಪಿಂಚಣಿಗೆ ವಿನಿಯೋಗಿಸಲಾಗುತ್ತಿದೆ. 50 ಸಾವಿರ ಅರ್ಹ ವೃದ್ಧರಿಗೆ ಗುರುತಿನ ಚೀಟಿ ನೀಡಲಾಗುವುದು. ವೃದ್ಧರ ಪ್ರಯಾಣ ಹಾಗೂ ಆರೋಗ್ಯ ಸೇವೆಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುವುದು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕ ಒಕ್ಕೂಟಗಳ ವೇದಿಕೆಯ ಅಧ್ಯಕ್ಷ ಪರಶುರಾಮ್, ಮಾಜಿ ಸಚಿವ ಡಾ.ಎ.ಬಿ.ಮಾಲಕಾರೆಡ್ಡಿ, ಗೋಲ್ಡನ್ ಆಶ್ರಮ ಮತ್ತು ಆಸ್ಪತ್ರೆ ಟ್ರಸ್ಟ್ನ ತುಮುಲ ಪ್ರಶಾಂತ್ ಪಾಲ್ಗೊಂಡಿದ್ದರು.
(ದಟ್ಸ್ಕನ್ನಡ ವಾರ್ತೆ)